ಗದಗ: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಖುರ್ಚಿ ಗದ್ದುಗೆ ಕಿತ್ತಾಟ ನಡೆದಿದ್ದು, ಸಿಎಂ ಸಿದ್ಧರಾಮಯ್ಯ ತಮ್ಮ ಆಡಳಿತದ ವೈಫಲ್ಯವನ್ನ ಜನರಿಂದ ಮರೆಮಾಚಲು ಜಾತಿಗಣತಿ ಅನುಷ್ಠಾನದ ವಿಚಾರವನ್ನ ತೇಲಿಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಆರೋಪಿಸಿದರು.
ಈ ಕುರಿತು ಇಂದು ಗದಗನಲ್ಲಿ ಪತ್ರಿಕಾ ಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು,ರಾಷ್ಟ್ರಮಟ್ಟದಲ್ಲಿಯೂ ಸಹ ಜಾತಿಗಣತಿ ಬಗ್ಗೆ ಚರ್ಚೆ ನಡೆಯುತ್ತಿದ್ದು, ಯಾವುದೇ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಾಗೂ ಅವರ ಬದುಕನ್ನ ಸುಂದರಗೊಳಿಸಲಿಕ್ಕೆ ಬಿಜೆಪಿ ವಿರೋಧಿಸುವದಿಲ್ಲ.ಸರ್ಕಾರ ತೆಗೆದುಕೊಳ್ಳುವಂಥ ನಿರ್ಧಾರಕ್ಕೆ ಬಿಜೆಪಿ ಎಂದಿಗೂ ಬದ್ಧವಿದೆ. ಆದರೆ ಕಾಂತರಾಜ ಮಾಡಿರುವ ಜನಗಣತಿ ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ಕೇವಲ ವೀರಶೈವ ಅಷ್ಟೇ ಅಲ್ಲದೇ, ಒಕ್ಕಲಿಗರೂ ಸಹ ಜಾತಿಗಣತಿ ಬಗ್ಗೆ ಆಕ್ಷೇಪ ಎತ್ತಿರುವದನ್ನ ಸರ್ಕಾರ ಗಮನಿಸಬೇಕಾಗಿದೆ. ಜಾತಿ ಸಮೀಕ್ಷೆಯನ್ನ ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಸಿಲ್ಲ ಅನ್ನೋದಕ್ಕೆ ಪ್ರಮುಖ ಕಾರಣಗಳಿವೆ. ಆದರೆ ಸಿಎಂ ಇದನ್ನ ಪರಿಗಣಿಸಿಲ್ಲ. ಸರ್ಕಾರ ನಡೆಸುವ ಮುಖ್ಯಸ್ಥರು ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಬೇಕಾಗಿದೆ. ಗುಳೆ ಹೋದವರನ್ನ ಪರಿಗಣಿಸದೇ ,ವೀರಶೈವ ಲಿಂಗಾಯತರೆಲ್ಲರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಅನ್ನೋದು ಸರ್ಕಾರದ ಗಮನಕ್ಕೆ ತರಲಾಗಿದೆ. ಒಂದು ವೇಳೆ, ಈ ಸಮೀಕ್ಷೆ ಸರ್ಕಾರ ಒಪ್ಪಿಕೊಂಡಲ್ಲಿ, ವೀರಶೈವ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಲಕ್ಷಾಂತರ ಮಂದಿಗೆ ಅನ್ಯಾಯವಾಗುತ್ತದೆ ಎಂದು ಸಿ.ಸಿ.ಪಾಟೀಲ ಹೇಳಿದರು.

ಕೆಲವೇ ಕೆಲವು ಜಾತಿವಾರು ಜನಸಂಖ್ಯೆಯನ್ನ ಸೋರಿಕೆ ಮಾಡಿ ಗೊಂದಲ ಮೂಡಿಸಲಾಗಿದ್ದು,ವೀರಶೈವ ಲಿಂಗಾಯತ ಸಮುದಾಯದ ಶೇ.50 ಕ್ಕಿಂತ ಹೆಚ್ಚು ಮನೆಗಳಿಗೆ ಗಣತಿದಾರರು ಭೇಟಿಯೇ ನೀಡಿಲ್ಲ. ಹೀಗಾಗಿ ರಾಜ್ಯದ ಎಲ್ಲ ಪಕ್ಷದ ವರಿಷ್ಠರಿಂದ ಟೀಕೆಗಳು ಕೇಳಿಬಂದಿವೆ.ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕಾಂತರಾಜ ಅವರು ವರದಿ ಸಿದ್ಧಪಡಿಸಿದ್ದು, ಹಿಂದಿನ ಅವಧಿಯಲ್ಲಿ ಸಿದ್ಧರಾಮಯ್ಯ ಸಿಎಂ ಇದ್ದಾಗಲೇ ವರದಿ ಸಿದ್ಧವಾಗಿದೆ. ಆದರೆ ಇದೀಗ ಖುರ್ಚಿ ಅಲುಗಾಡುವ ಹೊತ್ನಲ್ಲಿ ಜಾತಿಗಣತಿ ಮುನ್ನೆಲೆಗೆ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿನ ವೀರಶೈ ಲಿಂಗಾಯತ ಸಚಿವರು ಹಾಗೂ ಶಾಸಕರು ಈ ವರದಿಯನ್ನ ವಿರೋಧ ಮಾಡಿ, ನಮ್ಮ ಸಮಯದಾಯದ ರಕ್ಷಣೆಗೆ ನಿಲ್ಲಬೇಕು. ಹಾಗೂ ನಿಮ್ಮ ಖುರ್ಚಿ ಆಸೆಗೆ ಸಮುದಾಯವನ್ನ ಬಲಿಕೊಡಬಾರದು ಅನ್ನೋ ಎಚ್ಚರಿಕೆಯನ್ನ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಮುಖ್ಯಮಂತ್ರಿಗಳ ಒತ್ತಾಯಕ್ಕೆ ಮಣಿದು, ಅಧಿಕಾರದ ಆಸೆಗಾಗಿ, ವರದಿ ಜಾರಿಗೆ ಒಪ್ಪಿಕೊಂಡಿದ್ದೇ ಆದಲ್ಲಿ ಮುಂದಿನ ಚುನಾವಣೆಯಲ್ಲಿ ಸಮಾಜವೇ ಆಯಾ ಸಮುದಾಯದ ಸಚಿವರಿಗೆ ಶಾಸಕರಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.
ಗುತ್ತಿಗೆದಾರರ ಬಿಲ್ ವಿಚಾರ
ಇದೇ ವೇಳೆ, ಗುತ್ತಿಗೆದಾರರ ಬಾಕಿ ಉಳಿದಿರುವ ಬಿಲ್ ವಿಚಾರವಾಗಿ ಮಾತನಾಡಿದ ಸಿ.ಸಿ.ಪಾಟೀಲ, ಪಿಡಬ್ಲ್ಯುಡಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಗುತ್ತಿಗೆದಾರರ ಬಿಲ್ ವಿಚಾರ ಕೇಳಲು ಹೋದರೆ, ಹಿಂದಿನ ಸರ್ಕಾರ ಕೆಲಸ ಕೊಟ್ಟಿದೆ ಅಂತ ಉತ್ತರಿಸುತ್ತಿದ್ದಾರೆ. ಹಾಗಾದ್ರೆ ಹಿಂದಿನ ಸರ್ಕಾರದಲ್ಲಿ ನಾನೂ ಸಹ ಸತೀಶ ಜಾರಕಿಹೊಳಿ ಕ್ಷೇತ್ರಕ್ಕೆ ಕೆಲಸ ಕೊಟ್ಟಿದ್ದೆ. ಅಂದು ಅನುದಾನ ಇದೆಯೋ ಇಲ್ಲವೋ ಎಂದು ಕೇಳಿ ತಮ್ಮ ಕ್ಷೇತ್ರಕ್ಕೆ ಕೆಲಸ ತೆಗೆದುಕೊಳ್ಳಬೇಕಿತ್ತು. ಈಗ್ಯಾಕೆ ಬಿಲ್ ಕೊಡುವಾಗ ಹಿಂದಿನ ಸರ್ಕಾರ ಕೊಟ್ಟಿದೆ ಅಂತ ಜಾರಿಕೊಳ್ತಿದ್ದೀರಿ. ಹಿಂದಿನ ಸರ್ಕಾರ ಹೋಗಿ ೨ ವರ್ಷ ಆಗ್ತಾ ಬಂತು. ತೆರಿಗೆ ಸಂಗ್ರಹ ಏನಾಯಿತು. ಯಾವ ಉದ್ದೇಶಕ್ಕಾಗಿ ಬಿಲ್ ಪೆಂಡಿಂಗ್ ಇಟ್ಟಿದ್ದೀರಿ ಅನ್ನೋದನ್ನ ಸ್ಪಷ್ಟಪಡಿಸಿರಿ. ಬಿಬಿಎಂಪಿ ಹೊರತು ಪಡಿಸಿ, 32 ಸಾವಿರ ಕೋಟಿ ಗುತ್ತಿಗೆದಾರರ ಬಿಲ್ ಪೆಂಡಿಂಗ್ ಇದ್ದು, ಮುಂದೆ ಸಿದ್ಧರಾಮಯ್ಯ ಮಂಡಿಸುವ ಬಜೇಟ್ ನ ಅರ್ಧ ಭಾಗ, ಗುತ್ತಿಗೆದಾರರ ಬಾಕಿ ಹಣ ತೀರಿಸಲಿಕ್ಕೆ ಹೋಗುತ್ತೆ.

ನಾನು ನಾಲ್ಕನೇ ಬಾರಿ ಎಂಎಲ್ಎ ಆಗಿದ್ದು, ಈ ಸರ್ಕಾರದಲ್ಲಿ ಕೇವಲ ಪೇಪರ್ ಮೇಲಿನ ಎಂಎಲ್ ಆಗಿದ್ದೇನೆ. ಅಷ್ಟೇ ಅಲ್ಲದೇ, ಸರ್ಕಾರದ ಎಲ್ಲಾ ಶಾಸಕರು ಕೂಡ ಪೇಪರ್ ಟೈಗರನಂತೆ ಆಗಿದ್ದಾರೆ. ಇದೊಂದು ಪಾಪರ್ ಸರ್ಕಾರವಾಗಿದೆ ಅಂತ ವ್ಯಂಗ್ಯವಾಡಿದರು.
ಹಸುಗಳ ಕೆಚ್ಚಲು ಕೊಯ್ದ ವಿಚಾರ
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ, ಹಸುಗಳ ಕೆಚ್ಚಲು ಕೊಯ್ದಂಥ ಉದಾಹರಣೆ ಇದ್ದಿಲ್ಲ. ನಾಲ್ಕು ಹಸುಗಳನ್ನ ಕೊಡಿಸಿಬಿಡುತ್ತೇನೆ ಅನ್ನುವ ಸಚಿವ ಜಮೀರ್ ಅಹ್ಮದ್ ಗೆ ಮೂಕಪ್ರಾಣಿ ಹಸುಗಳ ಕೆಚ್ಚಲು ಕೊಯ್ಯುವಾಗ ಆಗುವ ನೋವು ಜಮೀರ್ ಅಹ್ಮದ್ ಗೊತ್ತಿಲ್ಲ. ಹೀಗಾಗಿ ಇದೊಂದು ಮತಾಂಧರ ಸರ್ಕಾರವಾಗಿದ್ದು, ಈ ರೀತಿಯ ವಿಚಿತ್ರ ಸರ್ಕಾರ ಇರುವ ಬದಲು, ವಿಸರ್ಜನೆ ಮಾಡಿ ಚುನಾವಣೆಗೆ ಬರುವದು ಸೂಕ್ತ ಎಂದು ಸಿ.ಸಿ.ಪಾಟೀಲ ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಎಂ.ಎಸ್.ಕರಿಗೌಡ್ರ, ಶ್ರೀಪತಿ ಉಡುಪಿ,ಪ್ರಕಾಶ ಅಂಗಡಿ,ಮಹೇಶ ದಾಸರ, ಸಿದ್ಧರಾಮೇಶ ಹಿರೇಮಠ, ಪ್ರಕಾಶ ಅಂಗಡಿ, ಅನಿಲ್ ಅಬ್ಬಿಗೇರಿ, ಶಿವು ಹಿರೇಮನಿ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.
