Home » News » ಬಂಜಾರಾ ಸಮುದಾಯದಿಂದ ಗೌರಿ ಸಸಿ ಹಬ್ಬ ಆಚರಣೆ…!ಕನ್ಯೆಯರ ಆಚರಿಸುವ ಸೊಬಗಿನ ಗೌರಿ ಸಸಿ ಹಬ್ಬ…!

ಬಂಜಾರಾ ಸಮುದಾಯದಿಂದ ಗೌರಿ ಸಸಿ ಹಬ್ಬ ಆಚರಣೆ…!ಕನ್ಯೆಯರ ಆಚರಿಸುವ ಸೊಬಗಿನ ಗೌರಿ ಸಸಿ ಹಬ್ಬ…!

by CityXPress
0 comments

ಲಕ್ಷ್ಮೇಶ್ವರ : ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ಸಾಂಸ್ಕೃತಿಕ ಪರಿಸರ ಹೊಂದಿದ ಸ್ಥಳದಲ್ಲಿ ವಾಸಿಸುತ್ತ.. ಸಂಸ್ಕೃತಿಯ ಜತೆಗೆ ಸಾಗುತ್ತಿರುವ ಬಂಜಾರಾ ಸಮುದಾಯದವರು ತಾಲೂಕಿನ ಹರದಗಟ್ಟಿ ತಾಂಡಾದಲ್ಲಿ ಸೌಹಾರ್ದ ಮೂಡಿಸುವ ಸಸಿ ಹಬ್ಬವನ್ನು ಆಚರಿಸಿದರು.

ವರದಿ‌ : ಪರಮೇಶ ಎಸ್ ಲಮಾಣಿ.

ಹಬ್ಬದ ಆಚರಣೆ ಸೊಬಗು ಸವಿಯಬೇಕಾದರೆ ನಾವು ಹರದಗಟ್ಟಿ ತಾಂಡಾಯತ್ತ ಮುಖಮಾಡಬೇಕು ಎನ್ನುವಂತಿತ್ತು, ಅದರಲ್ಲೂ ಬಂಜಾರಾ ಸಮುದಾಯದ ತಾಂಡಾಗಳತ್ತ ಸಾಗಿದರೆ ಅಲ್ಲಿ ಪ್ರತಿ ಹಬ್ಬವೂ ವಿಶೇಷ ಆಚರಣೆಯಿಂದ ಕೂಡಿರುತ್ತದೆ. ನಾನಾ ಕೊರತೆ ನಡುವೆಯೂ ಅಲ್ಲಿ ಹುರುಪಿನ ಮನಸ್ಸುಗಳಿರುತ್ತವೆ. ಹಬ್ಬಕ್ಕೆ ಸಡಗರದ ತಯಾರಿ ನಡೆಯುತ್ತದೆ. ಎಲ್ಲರೂ ಸಂತಸದಿಂದ ಪಾಲ್ಗೊಂಡು ಅದ್ಧೂರಿಯಾಗಿ ಆಚರಿಸಿ ಸೌಹಾರ್ದತೆ ಸಾರುತ್ತಿದ್ದಾರೆ. ಸೌಹಾರ್ದಕ್ಕೆ ಸಾಕ್ಷಿಯಾಗುವ ಇಂಥದೊಂದು ಹಬ್ಬ ನಾನಾ ತಾಂಡಾಗಳಲ್ಲಿ ಈಚೆಗೆ ಜರುಗುತ್ತಿರುವುದು ಹಸಿರು ಹಬ್ಬವಾಗಿದೆ. ಬಂಜಾರಾ ಬಂಧುಗಳು ನಮ್ಮೊಳಗಿನ ಕಾಮ ಕ್ರೋಧಗಳು ದೂರವಾಗಲಿ ಎಂದು ನಡೆಸುವ ಆಚರಣೆಯೇ ಸಸಿ ಹಬ್ಬ .

ಯುಗಾದಿ ಅಮವ್ಯಾಸೆ ದಿನದಿಂದ ಸಂತ ಶ್ರೀ ಸೇವಾಲಾಲ ಮತ್ತು ಮರಿಯಮ್ಮ ದೇವಿಯ ಹೆಸರಲ್ಲಿ ಒಂಬತ್ತು ದಿನಗಳ ಕಾಲ ದಿನಾಲು ನಾನ‌ಅ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದ ಮಹಿಳೆಯರು ಶನಿವಾರ ಕೊನೆಯದಂದು ವಿಜ್ರಂಭನೆಯಿಂದ ಗೌರಿ ಸಸಿ ಹೊಳೆಗೆ ಹೋಗುವುದು ಕಾರ್ಯಕ್ರಮ ಜರುಗಿತು.

banner

ಆಚರಣೆ ಹೇಗೆ?:

ಯುಗಾದಿ ಅಮಾವಾಸ್ಯೆ ದಿನ ಭೂಮಿತಾಯಿಗೆ ಪೂಜೆ ಸಲ್ಲಿಸಿ ಆ ಮಣ್ಣನ್ನು ಚಿಕ್ಕ ಬುಟ್ಟಿಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಬುಟ್ಟಿಯಲ್ಲಿ ಧಾನ್ಯಗಳನ್ನು ಹಾಕಲಾಗುತ್ತದೆ. ಅವು ಮೊಳಕೆಯೊಡೆದ ನಂತರ ನಿಗದಿತ ದಿನದಂದು ಸಾಂಪ್ರದಾಯಿಕ ದೇವರ ಹಾಡುಗಳು ಭಜನೆಯೊಂದಿಗೆ ಜಾಗರಣೆ ನಡೆಯುತ್ತದೆ. ಮರುದಿನ ಆ ಸಸಿಗಳಿಗೆ ಒಂದೆಡೆ ಸಾಮೂಹಿಕ ಪೂಜೆ ಸಲ್ಲಿಸಲಾಗುತ್ತದೆ. ಕನ್ಯೆಯರೇ ಈ ಪೂಜೆ ನಡೆಸುವುದು ವಿಶೇಷ.

ಮಣ್ಣಿನಿಂದ ಗಂಡು, ಹೆಣ್ಣು ಮೂರ್ತಿಗಳನ್ನು ನಿರ್ಮಿಸಿ ಅವುಗಳನ್ನು ಪೂಜಿಸಿ ಕಾಮ, ಕ್ರೋಧ ದೂರವಾಗಲಿ ಎಂದು ಪ್ರಾರ್ಥಿಸಲಾಗುತ್ತದೆ. ಇದಕ್ಕೆ ‘ಗನಗೋರಾ’ ಎನ್ನುತ್ತಾರೆ. ಪೂಜೆಯ ನಂತರ ಈ ಮೂರ್ತಿಗಳನ್ನು ನದಿಯಲ್ಲಿ ಹರಿಬಿಡಲಾಗುತ್ತದೆ.

ಸಸಿ ವಿನಿಮಯ!
ಬಳಿಕ ಹಲಗೆ ನಾದ, ಹಾಡುಗಳೊಂದಿಗೆ ಹೆಜ್ಜೆ ಹಾಕುತ್ತ ಸಸಿಯೊಂದಿಗೆ ತಾಂಡಾಗಳ ಎಲ್ಲ ದೇವಸ್ಥಾನಗಳಿಗೆ ತೆರಳಿ ಅವುಗಳನ್ನು ದೇವರಿಗೆ ಸ್ಪರ್ಶಿಸಲಾಗುತ್ತದೆ. ತಾಂಡಾದ ಹಿರಿಯರೆಲ್ಲರೂ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಎಲ್ಲರೂ ಪರಸ್ಪರ ಸಸಿಗಳನ್ನು ವಿನಿಮಯ ಮಾಡಿಕೊಂಡು ಬದುಕು ಬಂಗಾರವಾಗಲಿ ಎಂದು ಶುಭ ಕೋರುತ್ತಾರೆ. ಕನ್ಯೆಯರು ಸಸಿಗಳನ್ನು ಪಟ್ಟಗದಲ್ಲಿ ತುರಾಯಿಯಂತೆ ಇಟ್ಟುಕೊಂಡಾಗ ಆಚರಣೆಗೆ ತೆರೆ ಬೀಳುತ್ತದೆ.

ತಾಂಡಾಗಳಲ್ಲಿ ಸಂಭ್ರಮ:

ಅಗತ್ಯ ಸಂಬಳದ ಕೆಲಸ ಅರಸಿ ಗುಳೆ ಹೋಗುವವರಲ್ಲಿ ಜಿಲ್ಲೆಯ ಜನರಲ್ಲಿ ಬಂಜಾರಾ ಬಂಧುಗಳೆ ಅಧಿಕ. ಹೀಗೆ ಗುಳೆ ಹೋದ ಜನ ಮತ್ತೆ ಆಗಮಿಸುತ್ತಿದ್ದು ತಾಂಡಾದ ಜನರ ಮೊಗದಲ್ಲಿ ಹರ್ಷ ಮೂಡುತ್ತಿದೆ. ಸಸಿ ಹಬ್ಬ ಆಚರಿಸುವ ಕಾರಣಕ್ಕೆ ಗುಳೆ ಹೋಗಿದ್ದ ಜನ ಮರಳಿ ಬರುತ್ತಿದ್ದಾರೆ. ಒಂದೊಮ್ಮೆ ಬೀಕೋ ಎನ್ನುತ್ತಿದ್ದ ತಾಂಡಾಗಳಲ್ಲಿ ಸಸಿ ಹಬ್ಬದ ನೆಪದಲ್ಲಿ ಜನರ ಮೆರುಗು ಕಾಣಿಸುತ್ತಿದೆ.

ಗಮನ ಸೆಳೆವ ನೃತ್ಯ
ಬಂಜಾರಾ ಕನ್ಯೆಯರು, ಮಹಿಳೆಯರು ಹಲಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವುದನ್ನು ಸರ್ವರೂ ಕೆಲ ಕಾಲ ನಿಂತು ನೋಡುವಂತಿರುತ್ತದೆ. ಹೊಸ ಬಟ್ಟೆ ತೊಟ್ಟು ತಲೆ ಮೇಲೆ ಸಸಿ ಬುಟ್ಟಿ ಹೊತ್ತು ತಾಳಕ್ಕೆ ತಕ್ಕ ಹೆಜ್ಜೆ ಹಾಕುತ್ತಾರೆ. ಕೆಲವರು ನೃತ್ಯ ಗಮನ ಸೆಳೆಯುತ್ತದೆ.

ಸರ್ವರ ಬದುಕು ಬಂಗಾರವಾಗಲಿ ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದೇ ಸಸಿ ಹಬ್ಬದ ಮುಖ್ಯ ಉದ್ದೇಶ. ಉತ್ತಮ ಮಳೆಯಾಗಿ ಸರಿಯಾದ ಬೆಳೆ ಸಿಗಲಿ. ಗ್ರಾಮೀಣ ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸಲು ತಾಂಡಾದ ಎಲ್ಲಜನ ಈ ಹಬ್ಬದಲ್ಲಿಭಾಗವಹಿಸುತ್ತೇವೆ.

-ಸೋಮಲಪ್ಪ ನಾಯಕ, ಜೀವಪ್ಪ ಡಾವ, ಹರದಗಟ್ಟಿ ತಾಂಡಾ ಹಿರಿಯರು.

ಸಸಿ ಹಬ್ಬದ ನೆಪದಲ್ಲಿತಾಂಡಾದ ಎಲ್ಲಜನ ಒಂದೆಡೆ ಸೇರುತ್ತೇವೆ. ಇದರಿಂದ ನಮ್ಮ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ.

-ಕೃಷ್ಣ ಕಾರಭಾರಿ, ದೇವಪ್ಪ ಬಡಗೇರ ಹರದಗಟ್ಟಿ ತಾಂಡಾ ಯುವ ಮುಖಂಡರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb