ಗದಗ, ಜು. ೧೧ : ತಾಯಿಹಾಲಿಗೆ ಯಾವುದೇ ಪರ್ಯಾಯವಿಲ್ಲ. ಶಿಶುಗಳ ಆರೋಗ್ಯಕರ ಬೆಳವಣಿಗೆ ಮತ್ತು ಬುದ್ಧಿವಿಕಾಸಕ್ಕೆ ತಾಯಿಹಾಲೇ ಅತ್ಯುತ್ತಮ ಆಹಾರವಾಗಿದ್ದು, ಪೌಡರ್ ಹಾಲನ್ನು ಎಲ್ಲ ಮಕ್ಕಳಿಗೂ ಪ್ರೋತ್ಸಾಹಿಸುವುದಿಲ್ಲ ಎಂದು ಡಾ. ಶಿವನಗೌಡ್ರ ಜೋಳದರಾಶಿ ಹೇಳಿದರು.
ಅವರು ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ (ರಿ) ಅಮೂಲ್ಯ (ಪಿ) ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿರುವ ಆಯಾಗಳಿಗೆ ನವಜಾತ ಶಿಶುಗಳನ್ನು ಆರೈಕೆ ಕುರಿತು ತರಬೇತಿ ನೀಡಿ ಮಾತನಾಡಿದರು.
ಪೌಡರ್ ಹಾಲಿನಲ್ಲಿರುವ ಪೌಷ್ಟಿಕಾಂಶವನ್ನು ತಾಯಿಹಾಲಿನ ಮಟ್ಟಕ್ಕೆ ಹೊಂದಿಸುವ ಪ್ರಯತ್ನ ಮಾಡಲಾಗಿದ್ದರೂ, ಅದು ತಾಯಿಹಾಲಿಗೆ ಸಮನಾಗುವುದಿಲ್ಲ. ಸಾಮಾನ್ಯವಾಗಿ ಪೌಡರ್ ಹಾಲನ್ನು ಬಳಸಲು ಪ್ರೋತ್ಸಾಹಿಸಿದರೆ ಅನೇಕ ಪೋಷಕರು ಅದನ್ನೇ ಅವಲಂಬಿಸುವ ಸಾಧ್ಯತೆ ಇದೆ. ಇದರಿಂದ ಮಕ್ಕಳ ಬುದ್ಧಿವಿಕಾಸದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ತಿಳಿಸಿದರು.
ತಾಯಿ ಇಲ್ಲದ ಮಕ್ಕಳು, ತಾಯಿಗೆ ಆರೋಗ್ಯ ಸಮಸ್ಯೆ ಇರುವ ಕಾರಣದಿಂದ ಹಾಲುಣಿಸಲು ಸಾಧ್ಯವಾಗದ ಪರಿಸ್ಥಿತಿ ಅಥವಾ ವಿಶೇಷ ವೈದ್ಯಕೀಯ ಕಾರಣಗಳಿದ್ದಾಗ ಮಾತ್ರ ಪೌಡರ್ ಹಾಲನ್ನು ಬಳಸಬೇಕು. ಇದನ್ನು ಸಾಮಾನ್ಯ ಆಹಾರದಂತೆ ಪರಿಗಣಿಸದೆ, ವೈದ್ಯರ ಸಲಹೆ ಮತ್ತು ಸೂಚನೆಯ ಮೇರೆಗೆ ಮಾತ್ರ ಬಳಸಬೇಕು ಎಂದು ಅವರು ಒತ್ತಿಹೇಳಿದರು.
ಹಲವರು ವೈದ್ಯಕೀಯ ಸಲಹೆ ಪಡೆಯದೆ ಮೆಡಿಕಲ್ ಅಂಗಡಿಗಳಿದ ಪೌಡರ್ ಹಾಲು ಖರೀದಿಸಿ ಮಕ್ಕಳಿಗೆ ನೀಡುತ್ತಿರುವುದು ಸರಿಯಲ್ಲ. ಪೌಡರ್ ಹಾಲನ್ನು ಔಷಧಿಯಂತೆ ಪರಿಗಣಿಸಿ, ವೈದ್ಯರು ಸೂಚಿಸಿದಾಗ ಮಾತ್ರ ಬಳಸಬೇಕು ಎಂದರಲ್ಲದೆ, ವಿಶೇಷ ದತ್ತು ಸ್ವೀಕಾರ ಕೇಂದ್ರದ ಆಯಾಗಳು ಇಲ್ಲಿನ ಮಕ್ಕಳಿಗೆ ತಾಯಿಯಾಗಿ ಪಾಲನೆ ಪೋಷಣೆ ಮಾಡುತ್ತಿರುವದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದತ್ತು ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅವರು ಮಾತನಾಡಿ ದತ್ತು ಕೇಂದ್ರಗಳ ಶಿಶು ಮತ್ತು ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಡಾ.ಶಿವನಗೌಡರ ಪಾತ್ರ ಹಿರಿದಾದದ್ದು ಎಂದರು.
ವೇದಿಕೆಯ ಮೇಲೆ ಶ್ವೇತಾ ಶಿವನಗೌಡ್ರ ಜೋಳದರಾಶಿ, ಡಾ.ತೇಜಸ್ವಿನಿ ಹಿರೇಮಠ, ರ್ನಾ ಜೋಳದರಾಶಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೋಳದರಾಶಿ ದಂಪತಿಗಳು ಕೇಂದ್ರದ ಆಯಾಗಳಿಗೆ ಉಡುಗೋರೆ ನೀಡಿ ಸನ್ಮಾನಿಸಿ ಗೌರವಿಸಿದರು.
ಮಂಜುನಾಥ ಚನ್ನಪ್ಪನವರ ಸ್ವಾಗತಿಸಿದರು, ಅನಿತಾ ದೇವಧರ, ನಿರೂಪಿಸಿದರು ಕೊನೆಗೆ ರಾಜೇಶ ಖಟವಟೆ ವಂದಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರಾದ ನಾಗವೇಣಿ ಕಟ್ಟಿಮನಿ, ಲಲಿತಾಬಾಯಿ ಮೇರವಾಡೆ, ನರಸಿಂಹ ಕಾಮಾರ್ತಿ, ಗುರುಸಿದ್ಧಪ್ಪ ಕೊಣ್ಣೂರ ಮುಂತಾದವರಿದ್ದರು.

