ಗದಗ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು, ನೈತಿಕ ಮೌಲ್ಯಗಳು ಹಾಗೂ ಸಮಯಪಾಲನೆಯಂತಹ ಜೀವನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ‘ಒವ್ಸ್ ಟುವಾವ್ಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಿಪಿಎಸ್ ಅಕಾಡೆಮಿಯ ರಾಷ್ಟ್ರೀಯ ತರಬೇತುದಾರರಾದ ತೃಪ್ತಿ ಕೊಠಾರಿ ಮಾತನಾಡಿ, ಶ್ರೇಷ್ಠತೆಯನ್ನು ಸಾಧಿಸಲು ನಾಯಕನಲ್ಲಿ ಕೆಲವು ಪ್ರಮುಖ ಗುಣಗಳು ಇರಬೇಕು ಎಂದು ತಿಳಿಸಿದರು.
ಮೊದಲನೆಯದಾಗಿ ಆತ್ಮವಿಶ್ವಾಸ ಅಗತ್ಯವಾಗಿದ್ದು, “ಆತ್ಮವಿಶ್ವಾಸ ಇರುವ ವಿದ್ಯಾರ್ಥಿ ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಬಲ್ಲ” ಎಂದರು. ಎರಡನೆಯದಾಗಿ ಪ್ರಾಮಾಣಿಕತೆ ಬಗ್ಗೆ ಮಾತನಾಡಿ, ಪ್ರಾಮಾಣಿಕ ನಾಯಕನು ಎಲ್ಲರ ವಿಶ್ವಾಸ ಗಳಿಸುತ್ತಾನೆ ಎಂದು ಹೇಳಿದರು. ಮೂರನೆಯದಾಗಿ ಶಿಸ್ತು ಮತ್ತು ಸಮಯಪಾಲನೆ ಯಶಸ್ಸಿನ ಭದ್ರ ಅಡಿಪಾಯವಾಗಿವೆ ಎಂದು ತಿಳಿಸಿದರು.
ನಾಲ್ಕನೆಯದಾಗಿ ಉತ್ತಮ ಸಂವಹನ ಕೌಶಲ್ಯ ಕುರಿತು ಮಾತನಾಡಿದ ಅವರು, ಸ್ಪಷ್ಟವಾಗಿ ಮಾತನಾಡುವ ಹಾಗೂ ಇತರರ ಮಾತನ್ನು ಗಮನದಿಂದ ಕೇಳುವ ನಾಯಕನು ತಂಡವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲನೆಂದರು.
ಐದನೆಯದಾಗಿ ನಾಯಕತ್ವ ಗುಣ ಕುರಿತು ವಿವರಿಸಿದ ಅವರು, ನಾಯಕತ್ವದ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಗುಂಪು ಚರ್ಚೆಗಳು, ಸಮಸ್ಯೆ ಪರಿಹಾರ ಚಟುವಟಿಕೆಗಳು, ಪಾತ್ರಾಭಿನಯ, ತಂಡದ ಆಟಗಳು ಹಾಗೂ ಅನುಭವಗಳ ಹಂಚಿಕೆ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಆರನೆಯದಾಗಿ ಸಮಯದ ಸದ್ಬಳಕೆ ಕುರಿತು ಮಾತನಾಡಿದ ಅವರು, ಸಮಯವು ಜೀವನದ ಅತ್ಯಮೂಲ್ಯ ಸಂಪತ್ತಾಗಿದ್ದು, ಕಳೆದುಹೋದ ಹಣವನ್ನು ಸಂಪಾದಿಸಬಹುದು ಆದರೆ ಕಳೆದುಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯದ ಮಹತ್ವವನ್ನು ಅರಿತು ದಿನಚರಿಯನ್ನು ರೂಪಿಸಿಕೊಂಡು ಓದು, ಕ್ರೀಡೆ, ಯೋಗ, ವ್ಯಾಯಾಮ ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವಂತಹ ಉತ್ತಮ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಏಳನೆಯದಾಗಿ ನೈತಿಕ ಮೌಲ್ಯಗಳು ಕುರಿತು ಮಾತನಾಡಿ, ಸತ್ಯ, ಪ್ರಾಮಾಣಿಕತೆ, ಶಿಸ್ತು, ಕರುಣೆ, ಸಹಕಾರ, ಹಿರಿಯರಿಗೆ ಗೌರವ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಅಂಕಗಳು ನಮ್ಮ ಬುದ್ಧಿವಂತಿಕೆಯನ್ನು ತೋರಿಸಿದರೆ, ನೈತಿಕ ಮೌಲ್ಯಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಉತ್ತಮ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ ಎಂದು ತಿಳಿಸಿದರು.
ಇಂತಹ ಚಟುವಟಿಕೆಗಳು ಸಹಕಾರ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಜವಾಬ್ದಾರಿ ಹಾಗೂ ಸಮಯ ನಿರ್ವಹಣೆಯಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತವೆ ಎಂದು ಹೇಳಿದ ಅವರು, ಎಲ್ಇಡಿ ಪರದೆಯ ಮೂಲಕ ನಿರಂತರ ಎರಡು ಗಂಟೆಗಳ ಕಾಲ ವಿವಿಧ ವಿಷಯಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಧ್ಯಕ್ಷೀಯ ನುಡಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ವೈ. ಚಿಕ್ಕಟ್ಟಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಮುಂದಿನ ದೇಶದ ನಾಯಕರು. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಮನೆ, ಶಾಲೆ ಹಾಗೂ ಸಮಾಜದಲ್ಲಿ ಸಣ್ಣ ಸಣ್ಣ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ಉತ್ತಮ ನಾಯಕತ್ವದ ಆರಂಭವಾಗಿದೆ. ಉತ್ತಮ ನಾಯಕನು ಆದೇಶ ನೀಡುವುದಕ್ಕಿಂತ ಸ್ವತಃ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಮಾದರಿಯಾಗಬೇಕು. ಶ್ರೇಷ್ಠತೆ ಎಂಬುದು ಒಂದೇ ದಿನದಲ್ಲಿ ಸಿಗುವುದಿಲ್ಲ. ಅದು ನಿರಂತರ ಪರಿಶ್ರಮ, ಶಿಸ್ತು, ಕಲಿಯುವ ಮನೋಭಾವ ಹಾಗೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣಗಳಿಂದ ಸಾಧ್ಯ. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಚೈತನ್ಯ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಕೌಶಲ್ಯಗಳನ್ನು ಬೆಳೆಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ತರಬೇತುದಾರರಾದ ತೃಪ್ತಿ ಕೊಠಾರಿಯವರನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನದೊಂದಿಗೆ ಗೌರವಿಸಿದರು.
ತೃಪ್ತಿ ಕೊಠಾರಿಯವರ ಸಂಕ್ಷಿಪ್ತ ಪರಿಚಯವನ್ನು ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪಲ್ಲವಿ ನಿರಾಳ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶ್ರೀ ಐ. ಕೆ. ಕಮ್ಮಾರ, ವಿನಯ್ ಚಿಕ್ಕಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯರಾದ ವಿನಯ್ ಎಸ್. ಚಿಕ್ಕಟ್ಟಿ, ಬಿಪಿನ್ ಚಿಕ್ಕಟ್ಟಿ ಸಿಬಿಎಸ್ಇ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿಪಿನ್ ಚಿಕ್ಕಟ್ಟಿ, ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಿಬಿಎಸ್ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿರಿಯಾನ ಮುಲ್ಲಾ ಸ್ವಾಗತಿಸಿದರು. ಶಿಕ್ಷಕಿ ಬೃಂದಾ ಎಸ್. ಬೆಲ್ಲದ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಶೈಲಶಿಬಡಿಗೇರ ವಂದನಾರ್ಪಣೆಗೈದರು.
