ಲಕ್ಷ್ಮೇಶ್ವರ:
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ಸಂಭವಿಸಿದ ಎರಡು ಭೀಕರ ಕೊಲೆ ಪ್ರಕರಣಗಳು ಇಡೀ ತಾಲೂಕಿನನ್ನೇ ಬೆಚ್ಚಿಬೀಳಿಸಿವೆ.
ವರದಿ: ಮಹಲಿಂಗೇಶ ಹಿರೇಮಠ.ಗದಗ :ಪರಮೇಶ ಲಮಾಣಿ.ಲಕ್ಷ್ಮೇಶ್ವರ
ತಂದೆಯನ್ನೇ ಮಗ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಒಂದೆಡೆ ನಡೆದರೆ, ಮತ್ತೊಂದೆಡೆ ಜಮೀನಿನಲ್ಲಿ ಯುವಕನನ್ನು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಸಂಭವಿಸಿದೆ.
ಮಗನಿಂದಲೇ ತಂದೆಯ ಮರ್ಡರ್ – ಗೋವನಾಳ ಗ್ರಾಮದಲ್ಲಿ ಘಟನೆ..
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮಗನೊಬ್ಬ ತನ್ನದೇ ತಂದೆಯನ್ನು ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಶಂಕರಗೌಡ ದ್ಯಾವನಗೌಡ್ರ (60) ಎಂದು ಗುರುತಿಸಲಾಗಿದ್ದು, ಆರೋಪಿಯಾದ ಮಗ ಪ್ರಭು ಶಂಕರಗೌಡ ದ್ಯಾವನಗೌಡ್ರ (23) ತಂದೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕುಟುಂಬದವರಿಗೆ ಸೇರಿದ ಸುಮಾರು 2 ಎಕರೆ ಜಮೀನಿನ ವಿವಾದವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ಶುಕ್ರವಾರ ರಾತ್ರಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ತಂದೆ–ಮಗನ ನಡುವೆ ಜಗಳ ಉಂಟಾಗಿ, ಆಕ್ರೋಶಗೊಂಡ ಮಗ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಪ್ರಭು ದ್ಯಾವನಗೌಡ್ರ ಈತನನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಜಮೀನಿನಲ್ಲಿ ಯುವಕನ ಕ್ರೂರ ಹತ್ಯೆ? – ಶಿಗ್ಲಿ ಗ್ರಾಮದ ಬಳಿ ಶವ ಪತ್ತೆ..
ಇನ್ನೊಂದು ಭೀಕರ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನೊಂದರಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಜಮೀನೊಂದರಲ್ಲಿ ಯುವಕನನ್ನು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಮಹ್ಮದ್ ಫಾರೂಕ್ ಶೇಖ್ ಸನದಿ (25) ಎಂದು ಗುರುತಿಸಲಾಗಿದೆ. ಫಾರೂಕ್ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ನಿವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಶಿಗ್ಲಿ ಗ್ರಾಮದಲ್ಲಿ ವಾಸವಾಗಿದ್ದ.
ಲಕ್ಷ್ಮೇಶ್ವರ ಸಮೀಪದ ಜಮೀನಿನಲ್ಲಿ ಫಾರೂಕ್ನ ಶವ ಪತ್ತೆಯಾಗಿದ್ದು, ಕತ್ತು ಕೊಯ್ದು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೂ, ಪ್ರಕರಣದ ನಿಖರ ಹಿನ್ನೆಲೆ, ಕಾರಣ ಮತ್ತು ಆರೋಪಿಗಳ ಕುರಿತು ಕೂಲಂಕುಷ ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎನ್ನಲಾಗಿದೆ.
ಘಟನೆಗಳ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಗೋವನಾಳ ಹಾಗೂ ಶಿಗ್ಲಿ ಗ್ರಾಮದ ಹೊರವಲಯದ ಪ್ರದೇಶಕ್ಕೆ ಗದಗ ಎಸ್ಪಿ ರೋಹನ್ ಜಗದೀಶ (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗಳ ಬಗ್ಗೆ ಸರಿಯಾದ ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲಾಗುವದು ಎಂದು ಹೇಳಿದರು.
ಒಂದೇ ರಾತ್ರಿಯಲ್ಲಿ ಎರಡು ಕೊಲೆಗಳು – ಆತಂಕ..
ಕೊಲೆ ನಡೆದ ಸ್ಥಳಗಳಿಗೆ ಈಗಾಗಲೇ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ತನಿಖೆ ಪ್ರಾರಂಭಿಸಿವೆ. ಆದರೆ ಒಂದೇ ರಾತ್ರಿಯಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಎರಡು ಕೊಲೆ ಪ್ರಕರಣಗಳು ನಡೆದಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿವಿಧ ಕೋನಗಳಿಂದ ತನಿಖೆ ಕೈಗೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.
