ಬೆಂಗಳೂರು, ಮಾರ್ಚ್ 25:
ಕರ್ನಾಟಕ ರಾಜಕೀಯ ವಲಯದಲ್ಲಿ ಸದ್ಯ ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಹಾಗೂ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ವಿಧಾನಸೌಧದಲ್ಲಿ ನಡೆದ ಶಾಸಕರ ಗ್ರೂಪ್ ಫೋಟೋ ಶೂಟ್ ಹೊಸ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮಹಲಿಂಗೇಶ ಹಿರೇಮಠ. ಗದಗ
ಸಾಮಾನ್ಯವಾಗಿ ವಿಧಾನಸಭೆಯ ಅವಧಿ ಮುಕ್ತಾಯದ ಹೊತ್ತಿಗೆ ಸ್ಪೀಕರ್ ಸಮ್ಮುಖದಲ್ಲಿ ಎಲ್ಲಾ ಶಾಸಕರ ಗುಂಪು ಫೋಟೋ ತೆಗೆಯುವುದು ಪದ್ಧತಿ. ಆದರೆ ಈ ಬಾರಿ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಈ ಫೋಟೋ ಶೂಟ್ ನಡೆಸಲಾಗಿದೆ. ಇದರಿಂದಾಗಿ ಈ ಬೆಳವಣಿಗೆಯ ಹಿಂದೆ ರಾಜಕೀಯ ಸಂದೇಶವಿದೆಯೇ ಎಂಬ ಪ್ರಶ್ನೆ ಶಾಸಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.

ಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ ವಿಧಾನಸೌಧದ ಗ್ರ್ಯಾಂಡ್ ಮೆಟ್ಟಿಲುಗಳ ಮುಂದೆ 16ನೇ ವಿಧಾನಸಭೆಯ ಎಲ್ಲಾ ಸದಸ್ಯರೊಂದಿಗೆ ಫೋಟೋ ಶೂಟ್ ನಡೆಸಲಾಗಿದೆ. ಈ ಅನಿರೀಕ್ಷಿತ ಕ್ರಮವು ಸಿಎಂ ಬದಲಾವಣೆ ಅಥವಾ ಸಂಪುಟ ಪುನರ್ರಚನೆಯ ಮುನ್ನೋಟವೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಸಿಎಂ ಬದಲಾವಣೆ ಚರ್ಚೆಗೂ ಹೊಸ ಚೈತನ್ಯ
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ಇನ್ನೂ ಅವಧಿ ಉಳಿದಿದ್ದರೂ, ಇತ್ತೀಚೆಗೆ ನಾಯಕತ್ವ ಬದಲಾವಣೆ ಕುರಿತ ಮಾತುಕತೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆ, ಫೋಟೋ ಶೂಟ್ ಅನ್ನು “ಔಟ್ಗೋಯಿಂಗ್” ನೆನಪಿನ ಭಾಗವಾಗಿಯೇ ನಡೆಸಲಾಗಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಸ್ಪೀಕರ್ಗೆ ಸಚಿವ ಸ್ಥಾನ?
ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮತ್ತೊಂದು ಮಾತು ಎಂದರೆ, ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ. ಹೀಗಾಗಿ, ಸಭಾಧ್ಯಕ್ಷರ ಹುದ್ದೆಯಿಂದ ನಿರ್ಗಮನಕ್ಕೂ ಮುನ್ನ ಶಾಸಕರೊಂದಿಗೆ ಸ್ಮರಣಾರ್ಥ ಫೋಟೋ ತೆಗೆಸಿಕೊಳ್ಳಲಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಸಂಪುಟ ಪುನರ್ರಚನೆಗೆ ಒತ್ತಡ
ಇನ್ನೊಂದೆಡೆ, ರಾಜ್ಯ ಸರ್ಕಾರದ ಸಂಪುಟ ಪುನರ್ರಚನೆ ವಿಚಾರವಾಗಿ ಆಕಾಂಕ್ಷಿ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು, ಎರಡು ವರ್ಷ ಸೇವೆ ಸಲ್ಲಿಸಿರುವ ಸಚಿವರನ್ನು ಬದಲಿಸಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ ಫೋಟೋ ಶೂಟ್ ನಡೆದಿರುವುದು ಅನುಮಾನಗಳಿಗೆ ಮತ್ತಷ್ಟು ಬಲ ನೀಡಿದೆ.
ವಿಧಾನಸೌಧದ ಪಡಸಾಲೆಗಳಲ್ಲಿ ಚರ್ಚೆ
ವಿಧಾನಸೌಧದ ಒಳಗಡೆ, ವಿಶೇಷವಾಗಿ ಪಡಸಾಲೆಗಳಲ್ಲಿ, ಈ ಫೋಟೋ ಶೂಟ್ ಪ್ರಮುಖ ಚರ್ಚಾ ವಿಷಯವಾಗಿದ್ದು, ಶಾಸಕರು ಪರಸ್ಪರ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಲಭ್ಯವಾಗದಿರುವುದರಿಂದ ಗೊಂದಲ ಮತ್ತು ಕುತೂಹಲ ಹೆಚ್ಚುತ್ತಿದೆ.
ವಿಪಕ್ಷದ ಟೀಕೆಗಳು
ವಿಪಕ್ಷ ಬಿಜೆಪಿ ಶಾಸಕರು ಈ ಬೆಳವಣಿಗೆಯನ್ನು ಪ್ರಶ್ನಿಸಿ ನಾನಾ ರೀತಿಯ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮೂರು ಸಾಧ್ಯ ಕಾರಣಗಳನ್ನು ಉಲ್ಲೇಖಿಸಿದ್ದಾರೆ:
- ಸ್ಪೀಕರ್ ಖಾದರ್ ಅವರು ಸಚಿವ ಸ್ಥಾನಕ್ಕೆ ಹೋಗುವ ಸಾಧ್ಯತೆ
- ಮುಖ್ಯಮಂತ್ರಿ ಬದಲಾವಣೆ ಸಂಭವಿಸುವ ಸಾಧ್ಯತೆ
- ಮಧ್ಯಂತರ ಚುನಾವಣೆ ಸಾಧ್ಯತೆ
ಇದೇ ವೇಳೆ ಬಿಜೆಪಿ ಪಕ್ಷವೂ “ಇದು ಸಿಎಂ ಔಟ್ಗೋಯಿಂಗ್ ಫೋಟೋಶೂಟ್ ಆಗಿದೆಯೇ?” ಎಂದು ಪ್ರಶ್ನಿಸಿ ಕಾಂಗ್ರೆಸ್ ಮೇಲೆ ರಾಜಕೀಯ ದಾಳಿ ನಡೆಸಿದೆ.
ಒಟ್ಟಾರೆ ಕುತೂಹಲ ಹೆಚ್ಚಿಸಿದ ಬೆಳವಣಿಗೆ
ಒಟ್ಟಿನಲ್ಲಿ, ಅವಧಿಗೂ ಮುನ್ನವೇ ನಡೆದ ಈ ಗ್ರೂಪ್ ಫೋಟೋ ಶೂಟ್ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯಲಿವೆ ಎಂಬುದನ್ನು ಕಾದುನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

