ಗದಗ: ಪ್ರತಿಭೆಗೆ ಪರಿಸ್ಥಿತಿ ಅಡ್ಡಿಯಾಗುವುದಿಲ್ಲ ಎಂಬುದನ್ನು ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕುಮಾರ ಕಿರಣ ಹಿರೇಮಠ ತನ್ನ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾನೆ. ೨೦೨೫-೨೦೨೬ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಈ ವಿದ್ಯಾರ್ಥಿ, ಭೌತಶಾಸ್ತ್ರ ಹಾಗೂ ಗಣಿತಶಾಸ್ತ್ರ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಗಳಿಸಿ, ಇತರ ವಿಷಯಗಳಲ್ಲಿಯೂ ಗಣನೀಯ ಸಾಧನೆ ಮಾಡಿದ್ದು, ರಾಜ್ಯ ಮಟ್ಟದಲ್ಲಿ ೧೦ನೇ ರ್ಯಾಂಕ್ ಮತ್ತು ಗದಗ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.
ತಂದೆಯವರನ್ನು ಕಳೆದುಕೊಂಡ ನಂತರ, ಅಜ್ಜನ ಕೃಪಾಶೀರ್ವಾದದಲ್ಲಿ ಬೆಳೆದ ಕಿರಣ, ಆರ್ಥಿಕವಾಗಿ ಸಶಕ್ತವಲ್ಲದ ಆದರೆ ವಿದ್ಯಾವಿನೀತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾನೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಆತ ತನ್ನ ವಿದ್ಯಾಭ್ಯಾಸದಲ್ಲಿ ಶ್ರದ್ಧೆ, ಪರಿಶ್ರಮ ಮತ್ತು ನಿಯಮಿತತೆಯನ್ನು ಪಾಲಿಸಿಕೊಂಡು, ಇಂದಿನ ಈ ಮಹತ್ವದ ಸಾಧನೆಗೈದಿದ್ದಾನೆ.

ಈ ವಿದ್ಯಾರ್ಥಿಯ ಸಾಧನೆಗೆ ಸಂತಸಗೊಂಡ ಸನ್ಮಾರ್ಗ ಕಾಲೇಜು, ಆತನ ಸ್ವಗೃಹದಲ್ಲಿಯೇ ಹೃದಯಸ್ಪರ್ಶಿ ಹಾಗೂ ಸರಳ ಸಮಾರಂಭದ ಮೂಲಕ ಗೌರವಪೂರ್ವಕ ಸನ್ಮಾನವನ್ನು ನೆರವೇರಿಸಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಎಂ.ಸಿ. ಹಿರೇಮಠ ಅವರು ಮಾತನಾಡಿ, “ಕುಮಾರ ಕಿರಣ ಅತ್ಯಂತ ಸೌಮ್ಯ ಸ್ವಭಾವದ, ನಿಯಮಿತ (ರೆಗ್ಯುಲರ್) ವಿದ್ಯಾರ್ಥಿಯಾಗಿದ್ದು, ಎಲ್ಲ ಉಪನ್ಯಾಸಕರು, ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆತನ ಮೇಲೆ ಎಲ್ಲರೂ ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಆತ ಸಮರ್ಥವಾಗಿ ಈ ಸಾಧನೆಯ ಮೂಲಕ ಪೂರೈಸಿದ್ದಾನೆ” ಎಂದು ಅಭಿಪ್ರಾಯಪಟ್ಟರು.

ಇನ್ನೂ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪುನೀತ್ ದೇಶಪಾಂಡೆ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ ಮತೀನ್ ಮುಲ್ಲಾ, ಹಾಗೂ ಸಮಸ್ತ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗೆ ಶುಭಾಶಯಗಳನ್ನು ತಿಳಿಸಿ, ಮುಂದಿನ ಶೈಕ್ಷಣಿಕ ಜೀವನದಲ್ಲಿ ಇನ್ನಷ್ಟು ಉನ್ನತ ಮಟ್ಟದ ಸಾಧನೆ ಮಾಡಿ ಸಮಾಜಮುಖಿಯಾಗಿರಲಿ ಎಂದು ಹಾರೈಸಿದರು.
ಕುಮಾರ ಕಿರಣ ಹಿರೇಮಠನ ಈ ಸಾಧನೆ ಸನ್ಮಾರ್ಗ ಕಾಲೇಜಿಗೆ ಕೀರ್ತಿ ತಂದಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿಯೂ ಪರಿಣಮಿಸಿದೆ.
