ಗದಗ / ಮುಂಡರಗಿ ತಾಲೂಕು ವರದಿ:
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ವ್ಯವಸಾಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ( ಮಾ.23) ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆ ನಡೆದಿದೆ. ಸರ್ಕಾರದ ಮಹತ್ವಾಕಾಂಕ್ಷಿ ಬಿಸಿಯೂಟ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮತ್ತು ಎಸ್ಡಿಎಂಸಿ (SDMC) ಮಂಡಳಿಯ ನಡುವಿನ ಜಟಾಪಟಿಯಿಂದ, 200ಕ್ಕೂ ಹೆಚ್ಚು ಶಾಲಾ ಮಕ್ಕಳು ಮಧ್ಯಾಹ್ನದ ಊಟವಿಲ್ಲದೆ ಇಂದು ಹಸಿವಿನಿಂದ ನರಳುವಂತಾಯಿತು.
ಒಟ್ಟು 207 ವಿದ್ಯಾರ್ಥಿಗಳು ಓದುತ್ತಿರುವ ಈ ಶಾಲೆಯಲ್ಲಿ ನಿಯಮಾನುಸಾರ ಮೂವರು ಅಡುಗೆ ಸಿಬ್ಬಂದಿ ನೇಮಕವಾಗಬೇಕಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಇಬ್ಬರು ಸಿಬ್ಬಂದಿ ನಿವೃತ್ತಿ ಹೊಂದಿದ ನಂತರ ಅವರ ಸ್ಥಾನಗಳಿಗೆ ಯಾರನ್ನೂ ನೇಮಕ ಮಾಡಲಾಗಿಲ್ಲ. ಪರಿಣಾಮವಾಗಿ, ಒಬ್ಬರೇ ಅಡುಗೆ ಸಿಬ್ಬಂದಿ ಇಷ್ಟೊಂದು ಮಕ್ಕಳಿಗೆ ಬಿಸಿಯೂಟ ತಯಾರಿಸುವ ಹೊಣೆ ಹೊತ್ತಿದ್ದರು. ಆದರೆ ಆ ಸಿಬ್ಬಂದಿಯೂ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗಿ ಕೆಲಸಕ್ಕೆ ಹಾಜರಾಗದ ಹಿನ್ನೆಲೆ, ಇಡೀ ಬಿಸಿಯೂಟ ವ್ಯವಸ್ಥೆ ಕುಸಿದು ಬಿದ್ದಿದೆ.

ಮಧ್ಯಾಹ್ನ 1 ಗಂಟೆಯಾದರೂ ಊಟ ಸಿದ್ಧವಾಗದ ಕಾರಣ, ಹಸಿವಿನಿಂದ ಬಳಲಿದ ಮಕ್ಕಳು ಶಾಲಾ ಆವರಣದಲ್ಲಿಯೇ ಖಾಲಿ ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು. “ಊಟ ಬೇಕು… ಊಟ ಬೇಕು…” ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳ ಆಕ್ರೋಶವು ಆಡಳಿತದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಾಯಿತು. ಮನೆಗೆ ತೆರಳಿ ಊಟ ಮಾಡುವ ಅವಕಾಶವೂ ಇಲ್ಲದೆ, ತಂದೆ-ತಾಯಿಗಳು ಕೂಲಿ ಕೆಲಸಗಳಿಗೆ ಹೋಗಿರುವ ಕಾರಣ ಮಕ್ಕಳು ಶಾಲೆಯಲ್ಲೇ ಹಸಿವಿನಿಂದ ಕಂಗಾಲಾಗಿದ್ದರು.

ಈ ಪರಿಸ್ಥಿತಿಗೆ ಮೂಲ ಕಾರಣ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯ ಬೇಜವಾಬ್ದಾರಿತನವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಡುಗೆ ಸಿಬ್ಬಂದಿ ನೇಮಕಾತಿ ಮಾಡುವ ಜವಾಬ್ದಾರಿ ಗ್ರಾಮ ಪಂಚಾಯತ್ಗೆ ಇದ್ದರೂ, ಎರಡು ವರ್ಷಗಳಿಂದ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ದುಸ್ಥಿತಿ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ತೀವ್ರಗೊಂಡ ಬಳಿಕ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳು ಧಾವಿಸಿ, ತಾತ್ಕಾಲಿಕವಾಗಿ ಅಡುಗೆ ಸಿಬ್ಬಂದಿಯನ್ನು ನೇಮಿಸಿ ಊಟ ತಯಾರಿಸಿ ಮಕ್ಕಳಿಗೆ ವಿತರಿಸಿದರು. ಆದರೆ ಈ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದವೂ ನಡೆದಿದೆ.
ಸರ್ಕಾರದ ಬಿಸಿಯೂಟ ಯೋಜನೆ ಮಕ್ಕಳ ಪೌಷ್ಟಿಕತೆ ಹಾಗೂ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶ ಹೊಂದಿದರೂ, ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಅದು ಕಾಗದದಲ್ಲೇ ಸೀಮಿತವಾಗುತ್ತಿರುವುದು ವಿಷಾದನೀಯ. ಮಕ್ಕಳ ಹೊಟ್ಟೆಯ ಪ್ರಶ್ನೆಯನ್ನೇ ಕಡೆಗಣಿಸಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಧಿಕಾರಿಗಳ ನಡುವಿನ ಜಟಾಪಟಿಯಲ್ಲಿ ನಿರಪರಾಧಿ ಮಕ್ಕಳು ಹಸಿವಿನಿಂದ ಬಳಲುವಂತಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸಿದೆ. ಮಕ್ಕಳ ಬಾಯಿಗೆ ಬಿದ್ದ ತುತ್ತು ಕೂಡ ರಾಜಕೀಯ-ಆಡಳಿತದ ಅಲಕ್ಷ್ಯಕ್ಕೆ ಬಲಿಯಾಗುತ್ತಿರುವುದು ದುರ್ಭಾಗ್ಯಕರ ಸಂಗತಿ.
