ಗದಗ: ಅವಳಿ ನಗರದ ಗ್ರಾಮ ದೇವತೆಯರಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರಗಮ್ಮ ದೇವಿಯರ ಹರಿಜಾತ್ರೋತ್ಸವ ಕಾರ್ಯಕ್ರಮ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ, ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರಾ ಮಹೋತ್ಸವದುದ್ದಕ್ಕೂ ಹಗಲು-ರಾತ್ರಿ ನಿರಂತರವಾಗಿ ಶ್ರಮಿಸಿ ಜಾತ್ರೆ ಯಶಸ್ವಿಯಾಗಲು ಕಾರಣರಾದ ದಾನಿಗಳಿಗೆ, ಶ್ರಮಿಕರಿಗೆ, ಸೇವಕರಿಗೆ ಜಾತ್ರಾ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.
ಓಕ್ಕಲಗೇರಿ ಓಣಿಯಲ್ಲಿರುವ ದ್ಯಾಮವ್ವನ ಕಟ್ಟಿಯ ಆವರಣದಲ್ಲಿ ಸಮಿತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸ್ವಚ್ಛತೆಯ ಮೂಲಕ ಒಂಬತ್ತು ದಿನಗಳ ಕಾಲ ಗ್ರಾಮ ದೇವತೆಯರ ಸೇವೆ ಸಲ್ಲಿಸಿದ ಪೌರಕಾರ್ಮಿಕರು, ಛಾಯಾಗ್ರಾಹಕರು, ಕೆ.ಇ.ಬಿ ಸಿಬ್ಬಂಧಿ, ಅಡುಗೆ ಭಟ್ಟರು ಹಾಗೂ ಸಹಾಯಕರು, ಪಾತ್ರೆ ಸ್ವಚ್ಛತೆ ಮಾಡುವವರು, ಪ್ರಸಾದ ಉಣ ಬಡಿಸಿದವರು, ತೆಂಗಿನಕಾಯಿ ಒಡೆಯುವವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಜಾತ್ರೆಯಲ್ಲಿ ದುಡಿದ ಗಂಜೀ ಬಸವೇಶ್ವರ ಮಿತ್ರ ಮಂಡಳಿ, ದೇವಸ್ಥಾನ ಅರ್ಚಕರು ಹಾಗೂ ಕಾರ್ಯಕರ್ತರಿಗೂ ಸಹ ಗೌರವ ಸಮರ್ಪಿಸಲಾಯಿತು. ಹರಿಜಾತ್ರೋತ್ಸವ ಕಮಿಟಿಯವರ ಈ ಕಾರ್ಯದಿಂದ ಭಕ್ತಿ-ಭಾವದಿಂದ ಶ್ರಮಿಸಿದವರೆಲ್ಲರೂ ಸಂತೋಷದಿಂದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧನ ಸಹಾಯ ಮಾಡಿದವರ ಜೊತೆಗೆ ತನು-ಮನದಿಂದ ಭಾಗಿಯಾದವರನ್ನು ಗುರುತಿಸಿ ಗೌರವಿಸಿದ ಕೀರ್ತಿ ಕಮಿಟಿಯ ಸದಸ್ಯರಿಗೆ ಸಲ್ಲುತ್ತದೆ.
ಪ್ರತಿ ಹನ್ನೆರೆಡು ವರ್ಷಕ್ಕೊಮ್ಮೆ ನಡೆಯಲಿರುವ ಈ ಜಾತ್ರೆ ಪ್ರಸಕ್ತ ವರ್ಷ ಹದಿನೆಂಟು ವರ್ಷಕ್ಕೆ ಅದ್ದೂರಿಯಾಗಿ ಜರುಗಿತು. ಭಕ್ತರು ನಿರೀಕ್ಷೆಗೂ ಮೀರಿ ತನು-ಮನ-ಧನದಿಂದ ಭಾಗಿಯಾಗಿ ನಾಡಿನಾಧ್ಯಂತ ಗದಗ-ಬೆಟಗೇರಿ ಗ್ರಾಮದೇವತೆಯರು ವಿಜ್ರಂಭಿಸುವಲ್ಲಿ ಪ್ರಮುಖ ಕಾರಣರಾದರು. ಉಡಿ ತುಂಬುವ ಕಾರ್ಯಕ್ರಮದಲ್ಲಂತೂ ಸಹಸ್ರ ಸಂಖ್ಯೆಯಲ್ಲಿ ಮುತೈದೆಯರು ಭಾಗಿಯಾಗಿದ್ದು ಮತ್ತೊಂದು ವಿಶೇಷವಾಗಿತ್ತು.
ಗಮನ ಸೇಳೆದಿದ್ದ ಬಂಡಾರ ಜಾತ್ರೆ: 2026 ರ ಹರಿಜಾತ್ರೋತ್ಸವದಲ್ಲಿ ಈ ಬಾರಿ ಭಂಡಾರ ಜಾತ್ರೆ ನಾಡಿನ ಗಮನ ಸೇಳೆಯಿತು. ಭಕ್ತರು ನೀಡಿದ ಸುಮಾರು 17 ಟನ್ ಗೂ ಹೆಚ್ಚು ಭಂಡಾರದಲ್ಲಿ ಭಕ್ತರು ಮಿಂದೆದ್ದರು. ಪ್ರತಿ ಗಲ್ಲಿ-ಗಲ್ಲಿಗಳು ಹಳದಿ ಭಂಡಾರಮಯವಾಗಿದ್ದವು. ಹೀಗೆ ಹತ್ತು-ಹಲವಾರು ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸಿದವರನ್ನು ಗುರುತಿಸಿ ಗೌರವಿಸಿರುವುದು ಅವಿಸ್ಮರಣಿಯ ಕ್ಷಣವಾಗಿದ್ದಂತೂ ಸುಳ್ಳಲ್ಲ.
ಬಾಕ್ಸ್
ಹರಿಜಾತ್ರೋತ್ಸವದಲ್ಲಿ ಭಾಗವಹಿಸಿ ಗ್ರಾಮ ದೇವತೆಯರ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನಾಡಿನಾಧ್ಯಂತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆ ಯಶಸ್ವಿಗೋಳಿಸಿದ್ದಾರೆ.
ನವೀನ ನಾಲ್ವಾಡ
ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ
ಬಾಕ್ಸ್
12 ವರ್ಷಕ್ಕೊಮ್ಮೆ ನಡೆದ ಜಾತ್ರೆ ಈ ವರ್ಷ ಸಂಪನ್ನವಾಗಿದೆ. ಹಿರಿಯರ ಮಾರ್ಗದರ್ಶನ, ಭಕ್ತರ ಸಹಕಾರದೊಂದಿಗೆ ಜಾತ್ರೆ ಯಶಸ್ವಿಯಾಗಿದೆ. ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಜಾತ್ರೆ ಅದ್ದೂರಿಯಾಗಿ ನಡೆದದ್ದು ಮತ್ತೊಂದು ವಿಶೇಷ. ಮುಂಬರುವ ಜಾತ್ರೆ ಮತ್ತಷ್ಟು ಅದ್ದೂರಿಯಾಗಿ ನಡೆಯಲಿ.
ಹೇಮಂತ್ ಗಿಡ್ಡಹನುಮಣ್ಣನವರ
ಜಾತ್ರಾ ಕಮಿಟಿಯ ಸಹ ಸಂಘಟನಾ ಕಾರ್ಯದರ್ಶಿ
ಬಾಕ್ಸ್…
ಅವಳಿ ನಗರದ ಗ್ರಾಮ ದೇವತೆಯರ ಜಾತ್ರೆ ನಾಡಿನ ಹೆಸರಾಂತ ಜಾತ್ರೆಗಳಲ್ಲಿ ಒಂದಾಗಿದೆ. ಹಿಂದಿನ ಎಲ್ಲ ಜಾತ್ರೆಗಳಿಗಿಂತ ಈ ಬಾರಿ ವಿಶಿಷ್ಠವಾಗಿ ಪೂರ್ಣಗೊಂಡಿದೆ. ಜಾತ್ರೆ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿತ್ತು. ಪ್ರತಿದಿನ ಸಾಂಸ್ಕ್ರತೀಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ನಿರೀಕ್ಷೆಗೆ ಮೀರಿ ಜಾತ್ರೆ ಯಶಸ್ವಿಯಾಗಿದೆ.
ಬಸವರಾಜ ಮಡಿವಾಳರ
ಜಾತ್ರಾ ಕಮಿಟಿ ಸಹ ಕಾರ್ಯದರ್ಶಿ
ಶ್ರೀಧರ್ ವಜ್ರಬಂಡಿ, ರಾಜು ಖಾನಪ್ಪನವರ, ವೀರಣ್ಣ ಮೇಟಿ, ಮಂಜು ಅಂತರಗೊಂಡ, ಚೇತನ್ ಅಬ್ಬಿಗೇರಿ, ಮಲ್ಲು ಮಹಾಂತಶೆಟ್ಟರ, ಮಂಜುನಾಥ ಕುರ್ತಕೋಟಿ, ಈಶ್ವರ ಹಳ್ಳಿ, ಕಿರಣ್ ಕಮತರ, ಪರಶುರಾಮ ಹಳ್ಳದ, ನರಸಪ್ಪ ತುಕ್ಕಪ್ಪನವರ, ಬಸವರಾಜ ಹುಬ್ಬಳ್ಳಿ, ನಾಗರಾಜ ಮೇಣಸಗಿ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ಮಹೇಶ ರೋಖಡೆ, ಸುರೇಶ ಹೆಬಸೂರ, ಪಂಚಾಕ್ಷರಿ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರು ತಮ್ಮ ಅಮೂಲ್ಯ ಸೇವೆ ಸಲ್ಲಿಸುವ ಮೂಲಕ ಜಾತ್ರೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
