ಬಾಗಲಕೋಟೆ, ಜೂನ್ 8: ನೀರಿನ ಟ್ಯಾಂಕ್ನಲ್ಲಿ ಬಿದ್ದು ಒಂದೂವರೆ ವರ್ಷದ ಮಗು ಸಾವಿಗೀಡಾದ ದುರ್ಘಟನೆ ಇಂದು ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ. 38ರಲ್ಲಿ ನಡೆದಿದ್ದು, ಬಳಿಕ ಮಗುವನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಜೀವ ಮರಳುತ್ತದೆ ಎಂಬ ಮೂಢನಂಬಿಕೆಗೆ ಕುಟುಂಬಸ್ಥರು ಮೊರೆ ಹೋದ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ.
ಮೃತ ಮಗುವನ್ನು 18 ತಿಂಗಳ ಅಮೀನಾ ಪಠಾಣ್ ಎಂದು ಗುರುತಿಸಲಾಗಿದೆ. ಮನೆಯ ಸಮೀಪದ ಎದುರಿನ ಮನೆಯ ನೀರಿನ ಟ್ಯಾಂಕ್ನಲ್ಲಿ ಮಗು ಬಿದ್ದಿದ್ದು, ಆ ವೇಳೆ ಆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಕೆಲ ಸಮಯದ ಬಳಿಕ ಮಗು ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಟ್ಯಾಂಕ್ನಲ್ಲಿ ಮಗು ಪತ್ತೆಯಾಗಿದೆ.
ತಕ್ಷಣ ಮಗುವನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರೂ, ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಕೆಲವು ವಿಡಿಯೋಗಳು ಮತ್ತು ಮಾಹಿತಿಗಳನ್ನು ನಂಬಿದ ಕುಟುಂಬಸ್ಥರು ಹಾಗೂ ಸ್ಥಳೀಯರು, ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆಯಿಂದ ವಿಭಿನ್ನ ಪ್ರಯತ್ನಕ್ಕೆ ಮುಂದಾದರು.
ಸಂಜೆ ಸುಮಾರು 6.30 ಗಂಟೆಯಿಂದ ಮಗುವಿನ ದೇಹವನ್ನು ಕುತ್ತಿಗೆವರೆಗೆ ಉಪ್ಪಿನಲ್ಲಿ ಮುಚ್ಚಿಟ್ಟು ಇರಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಇದೇ ರೀತಿ ಮಗುವನ್ನು ಉಪ್ಪಿನೊಳಗೆ ಇಡಲಾಗಿದ್ದು, ಈ ವೇಳೆ ಮಗುವಿನ ಕಿವಿಯಲ್ಲಿ ಕುರಾನ್ ಪಠಣ ಕೂಡ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದರೆ, ಎಷ್ಟೇ ಸಮಯ ಕಳೆದರೂ ಮಗುವಿನಲ್ಲಿ ಯಾವುದೇ ಜೀವಚಟುವಟಿಕೆ ಕಾಣಿಸದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಇತರರು ಕುಟುಂಬಸ್ಥರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಬಳಿಕ ಕುಟುಂಬಸ್ಥರು ಮಗುವಿನ ದೇಹವನ್ನು ಉಪ್ಪಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದರು.
ವೈದ್ಯರ ಮನವೊಲಿಕೆಯ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ಸಮ್ಮತಿಸಿದರೆಂದು ಮೂಲಗಳು ತಿಳಿಸಿವೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಪರಿಶೀಲಿಸದ ಮಾಹಿತಿಗಳು ಹಾಗೂ ಮೂಢನಂಬಿಕೆಗಳು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಪರಿಣಮಿಸಿದೆ.
ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ದುರ್ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಮಕ್ಕಳ ಸುರಕ್ಷತೆ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
