ಗದಗ:
ಗದಗ: ಸ್ಥಾಲರ್ಶಿಪ್ ಹಣ ಸೇರಿದಂತೆ ವಿವಿಧ ಆಮಿಷಗಳನ್ನು ತೋರಿಸಿ ವೃತ್ತಿಪರ ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಗದಗ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಐದು ಮಂದಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಜನತೆ ಇಂತಹ ವಂಚಕರಿಂದ ಜಾಗರೂಕರಾಗಿರಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ವರದಿ:ಮಹಲಿಂಗೇಶ ಹಿರೇಮಠ.ಗದಗ.
ವಿಜಯನಗರ ಜಿಲ್ಲೆಯ ದಾಸರಹಳ್ಳಿ ತಾಂಡಾ ಮೂಲದ ವಾಕ್ಡೂತ್ ವಕೀಲ ದೇವೆಂದ್ರ ನಾಯಕ(23) ಹಾಗೂ ರಾಜು ರೇಖೆನಾಯಕ (24) ಎಂಬ ಇಬ್ಬರು ಆರೋಪಿಗಳು ಗದಗ ನಗರದ ಕಳಸಾಪೂರ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಒಟ್ಟು ಎಂಟು ಖಾತೆಗಳನ್ನ ತೆರೆಯುವ ಮೂಲಕ ಈ ಕೃತ್ಯ ನಡೆಸಿದ್ದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.

ವಿದ್ಯಾರ್ಥಿಗಳಿಗೆ ಸ್ಥಾಲರ್ಶಿಪ್ ಹಣ ದೊರಕಿಸುವುದಾಗಿ ಹೇಳಿ ಅವರ ಆಧಾರ್ ಹಾಗೂ ಇತರೆ ದಾಖಲೆಗಳನ್ನು ಪಡೆದು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಲವು ಖಾತೆಗಳನ್ನು ತೆರೆಯಿಸಿ, ಪಾಸ್ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮಾಹಿತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಪ್ರತಿಯೊಂದು ಖಾತೆ ತೆರೆಯುವಾಗ ಸುಮಾರು ರೂ.2000 ಹಣವನ್ನು ಆರೋಪಿಗಳೇ ನೀಡಿ ವಿದ್ಯಾರ್ಥಿಗಳನ್ನು ನಂಬಿಸಿ ಖಾತೆಗಳನ್ನು ತೆರೆಸುತ್ತಿದ್ದರು. ನಂತರ ಆ ಖಾತೆಗಳನ್ನು ಸೈಬರ್ ವಂಚನೆಗೆ ಬಳಸುವ ಉದ್ದೇಶ ಹೊಂದಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಗದಗ ಸೈಬರ್ ಕ್ರೈಂ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳು ಗೋವಾಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಇವರೊಂದಿಗೆ ಸಂಪರ್ಕ ಹೊಂದಿದ್ದ ಇತರೆ ಸಹಚರರಾದ ಜೀಶಾನ್ ಅನ್ಸಾರಿ @ ಜೀಸೂ (22) ಆಕಾಶ (32) ಹಾಗೂ ಸಾಹಿಲ್ ಮನೋಹರ ಟೆಕ್ಚೆಂದಾನಿ (22) ಛತ್ತೀಸ್ಗಢ ಇವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಿಂದ ಒಟ್ಟು 11 ಮೊಬೈಲ್ ಫೋನ್ಗಳು, 8 ಬ್ಯಾಂಕ್ ಖಾತೆಗಳ ಕಿಟ್ಗಳು, ಪಾಸ್ಬುಕ್ಗಳು, ಎಟಿಎಂ ಕಾರ್ಡ್ಗಳು, ಸಿಮ್ ಕಾರ್ಡ್ಗಳು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮಾಹಿತಿಯ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಖಾತೆಗಳು ವಿವಿಧ ಸೈಬರ್ ವಂಚನೆಗಳಿಗೆ ಬಳಸಲಾಗುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಪ್ರಸ್ತುತ ಐದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್, ಪಾಸ್ವರ್ಡ್ ಅಥವಾ ವೈಯಕ್ತಿಕ ಮಾಹಿತಿ ಯಾರಿಗೂ ನೀಡಬಾರದು. ಆಮಿಷ ತೋರಿಸಿ ಖಾತೆ ತೆರೆಯಲು ಕೇಳಿದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
