ವಿಸ್ತಾರ ವಾಯ್ಸ್ ಸುದ್ದಿ:
ಗದಗ: ಭಾರತ ಜನಗಣತಿ 2027ರ ಭಾಗವಾಗಿ ದೇಶವ್ಯಾಪಿ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರವು ಸ್ವಯಂ ಎಣಿಕೆ (Self-Enumeration) ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಮೂಲಕ ನಾಗರಿಕರು ತಮ್ಮ ಮನೆ ಮತ್ತು ಕುಟುಂಬದ ವಿವರಗಳನ್ನು ಆನ್ಲೈನ್ ಮೂಲಕ ಸ್ವತಃ ದಾಖಲಿಸಿಕೊಳ್ಳಬಹುದಾಗಿದೆ.
ಗದಗ–ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ದಿನಾಂಕ ಏಪ್ರಿಲ್ 1, 2026 ರಿಂದ ಏಪ್ರಿಲ್ 15, 2026ರವರೆಗೆ Self-Enumeration Window ತೆರೆದಿರುತ್ತದೆ. ಈ ಅವಧಿಯಲ್ಲಿ ನಾಗರಿಕರು ಅಧಿಕೃತ ಪೋರ್ಟಲ್ಗಳು — https://karnataka.census.gov.in ಮತ್ತು https://se.census.gov.in ಮೂಲಕ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ಸಲ್ಲಿಸಬಹುದಾಗಿದೆ.

ಸ್ವಯಂ ಎಣಿಕೆಯ ವೇಳೆ ಮನೆಯ ವಿವರಗಳು, ಕುಟುಂಬದ ಸದಸ್ಯರ ಹೆಸರು, ವಯಸ್ಸು, ಲಿಂಗ, ವಿದ್ಯಾರ್ಹತೆ, ಉದ್ಯೋಗ ಸೇರಿದಂತೆ ವಿವಿಧ ಮಾಹಿತಿಗಳನ್ನು ನಿಖರವಾಗಿ ನಮೂದಿಸಬೇಕಾಗುತ್ತದೆ. ಈ ಮಾಹಿತಿಯನ್ನು ಸಲ್ಲಿಸಿದ ನಂತರ ಪ್ರತಿಯೊಬ್ಬರಿಗೆ ಸ್ವಯಂ ಗಣತಿ ಗುರುತಿನ ಸಂಖ್ಯೆ (Self-Enumeration ID) ನೀಡಲಾಗುತ್ತದೆ.
ಈ ID ಸಂಖ್ಯೆಯನ್ನು ಗಣತಿದಾರರು ಮನೆಗೆ ಭೇಟಿ ನೀಡಿದಾಗ ನೀಡಿದರೆ, ಗಣತಿ ಪ್ರಕ್ರಿಯೆ ವೇಗವಾಗಿ ಹಾಗೂ ಸುಗಮವಾಗಿ ಪೂರ್ಣಗೊಳ್ಳಲು ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಈ ಡಿಜಿಟಲ್ ವ್ಯವಸ್ಥೆ ಜನಸಾಮಾನ್ಯರಿಗೆ ಸಮಯ ಉಳಿಸುವುದರ ಜೊತೆಗೆ ಗಣತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸುಗಮತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಆದ್ದರಿಂದ ಗದಗ–ಬೆಟಗೇರಿ ನಗರದ ಎಲ್ಲಾ ನಾಗರಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜನಗಣತಿ ದೇಶದ ಅಭಿವೃದ್ಧಿಗೆ ಆಧಾರಭೂತ ಮಾಹಿತಿಯನ್ನು ಒದಗಿಸುವ ಪ್ರಮುಖ ಪ್ರಕ್ರಿಯೆಯಾಗಿರುವುದರಿಂದ ಪ್ರತಿಯೊಬ್ಬರೂ ನಿಖರ ಮಾಹಿತಿಯನ್ನು ಸಲ್ಲಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಕೋರಲಾಗಿದೆ.
