ಗದಗ: ಗದಗನ ತೋಂಟದಾರ್ಯ ಮಠದ ಜಾತ್ರೆಗೆ ನಿನ್ನೆ ಸಂಜೆ (ಬುಧವಾರ) ಆಗಮಿಸಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಕುಟುಂಬ ರಾಜಕಾರಣದ ಬಗ್ಗೆ ನೀಡಿದ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ನಮ್ಮ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ, ಎಲ್ಲ ಪಕ್ಷಗಳಲ್ಲೂ ಇದೆ” ಎಂದು ಅವರು ನೇರವಾಗಿ ಒಪ್ಪಿಕೊಂಡಿರುವುದು ಗಮನ ಸೆಳೆದಿದೆ.
ಕುಟುಂಬ ರಾಜಕಾರಣ: ಸಮರ್ಥನೆ ಅಥವಾ ಸಮರ್ಪಣೆ?
ಕುಟುಂಬ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, ಇಂಜಿನಿಯರ್ ಮಗ ಇಂಜಿನಿಯರ್ ಆಗ್ತಾನೆ. ಅದರಲ್ಲಿ ತಪ್ಪೇನು?” ಎಂದು ಪ್ರಶ್ನಿಸಿ, ರಾಜಕೀಯದಲ್ಲೂ ಇದೇ ಪರಂಪರೆ ಸಹಜ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹೇಳಿಕೆ ಒಂದು ಕಡೆ ವಾಸ್ತವವನ್ನು ಒಪ್ಪಿಕೊಳ್ಳುವ ಧೈರ್ಯವೋ, ಮತ್ತೊಂದೆಡೆ ರಾಜಕೀಯದಲ್ಲಿ ಪರಂಪರೆಯ ಪದ್ಧತಿಯನ್ನು ಸಮರ್ಥಿಸುವ ಯತ್ನವೋ ಎಂಬ ಚರ್ಚೆ ಆರಂಭವಾಗಿದೆ.
ವರದಿ:ಮಹಲಿಂಗೆಶ ಹಿರೇಮಠ. ಗದಗ
ಅವರು ಇನ್ನೂ ಮುಂದುವರಿದು, ಉಪಚುನಾವಣೆಗಳಲ್ಲಿ ನಿಧನ ಹೊಂದಿದ ನಾಯಕರ ಕುಟುಂಬಸ್ಥರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ನ ಪದ್ದತಿ ಎಂದು ಸ್ಪಷ್ಟಪಡಿಸಿದರು. “ನಾನೂ ಸಹ ಉಪಚುನಾವಣೆಯಲ್ಲಿಯೇ ಗೆದ್ದು ಬಂದಿದ್ದೇನೆ. ನನ್ನ ತಂದೆ ನಿಧನರಾದ ಬಳಿಕ ನನಗೆ ಟಿಕೆಟ್ ನೀಡಿದ್ದರು” ಎಂದು ತಮ್ಮ ಉದಾಹರಣೆ ನೀಡಿದರು.
ಉಪ ಚುನಾವಣೆ: ಕಾಂಗ್ರೆಸ್ ವಿಶ್ವಾಸದ ಮಾತು
ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗಳ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, “ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಉತ್ತಮ ವಾತಾವರಣ ಇದೆ” ಎಂದರು. ಹಿಂದಿನ ಉಪಚುನಾವಣೆಗಳಲ್ಲಿಯೂ ಕಾಂಗ್ರೆಸ್ ಸಾಧನೆ ಮಾಡಿದೆ ಎಂದು ಅವರು ನೆನಪಿಸಿದರು.

ಬಂಡಾಯ ಅಭ್ಯರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಾಗಲಕೋಟೆಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು. ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಆಕ್ರೋಶದ ವಿಚಾರಕ್ಕೂ ಪ್ರತಿಕ್ರಿಯಿಸಿ, “ಸಾಧಿಕ್ ಫೈಲ್ವಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಜಮೀರ್ ಅಹ್ಮದ್ ಖಾನ್ ಸಹ ಪ್ರಚಾರಕ್ಕೆ ಬರಲಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ವಿರುದ್ಧ ತೀಕ್ಷ್ಣ ವಾಗ್ದಾಳಿ
ಉಪಚುನಾವಣೆಯಲ್ಲಿ “ಸೂಟಿಕೇಸ್ ರಾಜಕಾರಣ” ನಡೆದಿದೆ ಎಂಬ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪಾಟೀಲ್, “ಅವರಿಗೆ ಅದೇ ರೂಢಿ. ಅವರ ತಂದೆ ಕಾಲದಲ್ಲೂ ಇದೇ ನಡೆದಿತ್ತು” ಎಂದು ತಿರುಗೇಟು ನೀಡಿದರು.
‘ಟ್ಯಾಕ್ಸ್ ಟೆರರಿಸಂ’ – ಹಳೆಯ ಸರ್ಕಾರದ ಮೇಲೆ ಗರಂ
ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕಿಡಿಕಾರಿದ ಸಚಿವರು, “1 ಲಕ್ಷ ಕೋಟಿ ರೂಪಾಯಿ ಗುತ್ತಿಗೆದಾರರ ಬಾಕಿ ಬಿಲ್ ಬಿಟ್ಟಿದ್ದಾರೆ. ಅದು ಈಗ ನಮ್ಮ ಸರ್ಕಾರಕ್ಕೆ ಭಾರವಾಗಿದೆ” ಎಂದು ಆರೋಪಿಸಿದರು. ಈ ಹಿನ್ನೆಲೆ ‘ಟ್ಯಾಕ್ಸ್ ಟೆರರಿಸಂ’ ಬಗ್ಗೆ ಮಾತಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಸೂಚಿಸಿದರು.

ಗ್ಯಾಸ್ ಸಿಲಿಂಡರ್ ಅಭಾವ: ಪ್ರಧಾನಿ ವಿರುದ್ಧ ವ್ಯಂಗ್ಯ
ಗ್ಯಾಸ್ ಸಿಲಿಂಡರ್ ಅಭಾವದ ಪ್ರಶ್ನೆಗೆ ಉತ್ತರಿಸಿದ ಅವರು, ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡುತ್ತಾ, “ಗಟರ್ನಲ್ಲಿ ಗ್ಯಾಸ್ ಕಂಡುಹಿಡಿದವರು ಅವರೇ, ಅವರನ್ನೇ ಕೇಳಿ” ಎಂದು ಹೇಳಿದರು.
ವಿದೇಶಾಂಗ ನೀತಿ: ಮೋದಿ ವಿರುದ್ಧ ಟೀಕೆ
ವಿದೇಶಾಂಗ ನೀತಿ ವಿಷಯದಲ್ಲೂ ಪ್ರಧಾನಿ ವಿರುದ್ಧ ಟೀಕಿಸಿದ ಸಚಿವರು, “ನಮ್ಮದೇ ಆದ ವಿದೇಶಾಂಗ ನೀತಿ ಇದೆ. ಆದರೆ ಮೋದಿ ಅವರದು ಬೇರೆ” ಎಂದು ಹೇಳಿದರು. ಇಸ್ರೆಲ್ ವಿಚಾರದಲ್ಲೂ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಪರೋಕ್ಷವಾಗಿ ಟೀಕಿಸಿದರು. “ಇರಾನ್ ನಮ್ಮ ಮಿತ್ರ ರಾಷ್ಟ್ರ. ಆದರೂ ಯಾವುದೇ ದ್ವೇಷ ತೋರಿಸಿಲ್ಲ. ಹರ್ಮೂಜ್ ಜಲಸಂಧಿಯಿಂದ ನಮ್ಮ ಹಡಗುಗಳನ್ನು ಬಿಡುತ್ತಿದ್ದಾರೆ” ಎಂದು ಹೇಳಿದರು.
ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆಗಳಲ್ಲಿ ರಾಜಕೀಯ ನೈಜತೆ ಹಾಗೂ ವ್ಯಂಗ್ಯ ಎರಡೂ ಮಿಶ್ರಿತವಾಗಿವೆ. ಕುಟುಂಬ ರಾಜಕಾರಣವನ್ನು “ಸಹಜ” ಎಂದು ಚಿತ್ರಿಸಿರುವುದು, ರಾಜಕೀಯದಲ್ಲಿ ಹೊಸ ಮುಖಗಳಿಗೆ ಅವಕಾಶ ಕಡಿಮೆಯಾಗುತ್ತಿದೆ ಎಂಬ ಟೀಕೆಗೆ ಇಂಧನ ನೀಡಬಹುದು. ಉಪಚುನಾವಣೆಗಳಲ್ಲಿ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಪದ್ಧತಿಯನ್ನು ಅವರು ಸ್ಪಷ್ಟವಾಗಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಒಳಗಿನ ರಾಜಕೀಯ ಶೈಲಿಯನ್ನೇ ಪ್ರತಿಬಿಂಬಿಸುತ್ತದೆ.

