ಗದಗ, ಏ. 28: ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಭೂಮಿ ದಿನಾಚರಣೆಯ ಅಂಗವಾಗಿ ‘ಮಣ್ಣು ರಕ್ಷಿಸಿ’ ಎಂಬ ಶೀರ್ಷಿಕೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಭವ್ಯ ಜಾಗೃತಿ ರ್ಯಾಲಿಯನ್ನು ಸಂಘಟಿಸಲಾಯಿತು. ಪರಿಸರ ಸಂರಕ್ಷಣೆ, ಮಣ್ಣಿನ ಮಹತ್ವ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರ್ಯಾಲಿಗೆ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಣ್ಣು, ನೀರು ಮತ್ತು ನಿಸರ್ಗದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮಣ್ಣಿನ ಫಲವತ್ತತೆ ಹಾಗೂ ಅದರ ಸಮರ್ಪಕ ನಿರ್ವಹಣೆಯ ಅಗತ್ಯತೆಯನ್ನು ವಿವಿಧ ವಿಡಿಯೋಗಳ ಮುಖಾಂತರ ಪ್ರಾಸಂಗಿಕ ಉದಾಹರಣೆಗಳೊಂದಿಗೆ ವಿವರಿಸಿದರು.
ಇಂದಿನ ಮಾನವರು ಐಶಾರಾಮಿ ಜೀವನದ ಹಿಂದೆ ಓಡುತ್ತಾ ಕಾಡು, ಗಿಡ, ಮರಗಳನ್ನು ನಿರ್ದಯವಾಗಿ ಕಡಿದ ಪರಿಣಾಮವಾಗಿ ಮಣ್ಣು ಸವೆತ, ಕಾಡು ಪ್ರಾಣಿಗಳ ನಾಡಿನತ್ತ ನುಗ್ಗುವಿಕೆ, ಕ್ರಿಮಿಕೀಟಗಳ ಹೆಚ್ಚಳ, ಭಯಾನಕ ರೋಗಗಳು ಮತ್ತು ಅಂತರಜಲದ ಕೊರತೆ ಉಂಟಾಗಿದೆ ಎಂದು ಅವರು ಎಚ್ಚರಿಸಿದರು. ಇನ್ನಾದರೂ ನಾವು ಎಚ್ಚೆತ್ತು ಮಣ್ಣನ್ನು ರಕ್ಷಿಸಿ, ಜೀವ, ಜಲ, ನೆಲ ಹಾಗೂ ಪ್ರಾಣಿ-ಪಕ್ಷಿಗಳನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸದ್ಗುರು ಅವರ ಭೂಮಿ ಸಂರಕ್ಷಣೆಯ ಕುರಿತ ಸಂದೇಶಗಳನ್ನು ವಿಡಿಯೋ ಮೂಲಕ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪುನಿತ್ ದೇಶಪಾಂಡೆ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಚೇರ್ಮನ್ ಪ್ರೊ. ರಾಜೇಶ ಕುಲಕರ್ಣಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪ್ರಕೃತಿ ಮಾತೆ, ಜೀವಜಲ ಇವುಗಳನ್ನು ನಾವು ಇನ್ನಾದರೂ ಸಮರ್ಪಕವಾಗಿ ಉಪಯೋಗಿಸದಿದ್ದರೆ ಮಹಾನಾಶ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. “ಇಲ್ಲಿಯವರೆಗೆ ತುಳಿದೇ ನೀ ಮಣ್ಣನ್ನು, ಇನ್ನೇನು ಅದು ತುಳಿಯಲಿದೆ ನಿನ್ನನ್ನು” ಎಂಬ ಸಂದೇಶದ ಮೂಲಕ ಪರಿಸರದ ಮೇಲಿನ ಮಾನವನ ನಿರ್ಲಕ್ಷ್ಯವನ್ನು ಅವರು ಗಂಭೀರವಾಗಿ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಂ ಸಿ ಹಿರೇಮಠ, ನಿರ್ದೇಶಕರುಗಳಾದ ಪ್ರೊ. ಸೈಯದ್ ಮತೀನ ಮುಲ್ಲಾ ಹಾಗೂ ಪ್ರೊ. ರಾಹುಲ್ ಒಡೆಯರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಒಟ್ಟಿನಲ್ಲಿ, ‘ಮಣ್ಣು ರಕ್ಷಿಸಿ’ ರ್ಯಾಲಿ ಮತ್ತು ಪೂರ್ವಭಾವಿ ಸಭೆಯ ಮೂಲಕ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪ್ರಯತ್ನ ಕೈಗೊಳ್ಳಲಾಯಿತು.
