ಗದಗ:
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬೆಳಗಿನ ವಾಕಿಂಗ್ಗೆ ತೆರಳಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಪಟ್ಟಣದ ಚನ್ನಮ್ಮ ಡಿ.ಎಡ್ ಕಾಲೇಜ್ ಸಮೀಪ ಈ ಅಪಘಾತ ಸಂಭವಿಸಿದೆ. ಮೃತರನ್ನು ಶಿವಾನಂದ ಹುಲಕೋಟಿ (50) ಹಾಗೂ ಅಶೋಕ್ ಸರವಿ (52) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ಎಂ.ಎಸ್. ಚಾಕಲಬ್ಬಿ ಆಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ನವನಾಥ ಅನಂದರಾವ್ ಮಾನೆ (43) ಈ ಘಟನೆಗೆ ಕಾರಣಾಗಿದ್ದು, ಇತನೆ ಕಾರು ಚಾಲನೆ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಮಹಾರಾಷ್ಟ್ರದಿಂದ ಹುಬ್ಬಳ್ಳಿ ಮಾರ್ಗವಾಗಿ ಲಕ್ಷ್ಮೇಶ್ವರ ಕಡೆಗೆ ಬರುತ್ತಿದ್ದ ಹುಂಡೈ ಕಾರು, ಓವರ್ ಸ್ಪೀಡ್ನಲ್ಲಿದ್ದು, ಚಾಲಕನು ನಿದ್ದೆ ಮಂಪರಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದವರ ಮೇಲೆ ಏಕಾಏಕಿ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಶಿವಾನಂದ ಮತ್ತು ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಇಬ್ಬರೂ ಬೆಳಗಿನ ಜಾವ ಈಶ್ವರ ನಗರ ಪ್ರದೇಶದಿಂದ ವಾಕಿಂಗ್ಗೆ ಹೊರಟಿದ್ದರು. ಇದೇ ವೇಳೆ ಸಂಭವಿಸಿದ ಈ ದುರ್ಘಟನೆ ಸ್ಥಳೀಯರಲ್ಲಿ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
