ಗದಗ : ವಿನಯ್/ಬಿಪಿನ್ ಚಿಕ್ಕಟ್ಟಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿನಿಯರ ಸನ್ಮಾನ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮಾನ್ಯಶ್ರೀ ಎಸ್. ವಿ. ಸಂಕನೂರ ಅವರು ಮಾತನಾಡಿ, “ಅಂಕಗಳ ಜೊತೆಗೆ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವುದು ಗುರುವಿನ ಪ್ರಮುಖ ಕಾರ್ಯವಾಗಿದೆ” ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ನಿರಂತರ ಅಧ್ಯಯನ, ಪ್ರಾಧ್ಯಾಪಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರವೇ ಈ ಸಾಧನೆಗೆ ಕಾರಣವಾಗಿದ್ದು, ಪೋಷಕರು ಮಕ್ಕಳ ಮೇಲೆ ವಿಶ್ವಾಸವಿಟ್ಟು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.

ಒತ್ತಡದ ಶಿಕ್ಷಣಕ್ಕಿಂತ ವಿದ್ಯಾರ್ಥಿಗಳ ಆಸಕ್ತಿಯ ವಿಷಯದ ಕುರಿತು ವಿದ್ಯಾಭ್ಯಾಸ ಮಾಡಿಸುವುದು ಉತ್ತಮವಾಗಿದ್ದು, ವಿದ್ಯಾರ್ಥಿಗಳು ಕೂಡ ತಮ್ಮ ಆಸಕ್ತಿಗಳನ್ನು ಪಾಲಕರಿಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು. ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಇತರರಿಗೆ ಸ್ಪೂರ್ತಿಯಾಗುತ್ತದೆ ಎಂದ ಅವರು, ಈ ಫಲಿತಾಂಶ ಅಂತಿಮ ಗುರಿಯಲ್ಲ, ಭವಿಷ್ಯದ ದೊಡ್ಡ ಸಾಧನೆಗಳ ಆರಂಭವಾಗಿದ್ದು, ಉನ್ನತ ಗುರಿಗಳನ್ನು ಹೊಂದಿ ಪರಿಶ್ರಮದಿಂದ ಯಶಸ್ಸನ್ನು ಗಳಿಸಬೇಕು ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಮಾತನಾಡಿ, ಈ ಸಾಲಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಅತ್ಯುತ್ತಮ ಫಲಿತಾಂಶ ತಂದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಉತ್ತಮ ಫಲಿತಾಂಶದ ಹಿಂದೆ ನಿರಂತರ ಪರಿಶ್ರಮ, ಶಿಸ್ತಿನ ಅಧ್ಯಯನ ಹಾಗೂ ಗುರಿಯತ್ತ ಇರುವ ದೃಢ ನಿಶ್ಚಯ ಮುಖ್ಯವಾಗಿದ್ದು, ವಿದ್ಯಾರ್ಥಿನಿಯರು ಅದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಯಶಸ್ಸು ಬಂದಾಗ ವಿನಯವನ್ನು ಉಳಿಸಿಕೊಳ್ಳಬೇಕು, ವಿಫಲತೆ ಎದುರಾದಾಗ ಧೈರ್ಯ ಕಳೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಆತ್ಮವಿಶ್ವಾಸ, ಪರಿಶ್ರಮ ಮತ್ತು ಸಕಾರಾತ್ಮಕ ಮನೋಭಾವ ಜೀವನದಲ್ಲಿ ಸಾಧನೆಗೆ ಅಗತ್ಯವೆಂದು ತಿಳಿಸಿದರು.
೨೦೨೫–೨೬ನೇ ಸಾಲಿನ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ನಿಸರ್ಗ ವಸ್ತ್ರದ (೯೭.೫೦%), ಸಫಿಯಾ ಅಣ್ಣಿಗೇರಿ (೯೬.೫೦%), ಸಾಯದಾ ಎಸ್. ಬಿ. (೯೩.೦೦%), ಪ್ರೀತಿ ಯಳವತ್ತಿ (೯೨.೧೭%) ಹಾಗೂ ದಿವ್ಯ ಮುರಗೋಡ (೮೯.೮೩%) ವಿದ್ಯಾರ್ಥಿನಿಯರನ್ನು ಮಾನ್ಯಶ್ರೀ ಎಸ್. ವಿ. ಸಂಕನೂರ ಅವರು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಕಛೇರಿಯಲ್ಲಿ ಮೂರು ವರ್ಷಗಳವರೆಗೆ ಪ್ರಥಮ ದರ್ಜೆ ಸಹಾಯಕರಾಗಿ ಉತ್ತಮ ಸೇವೆ ಸಲ್ಲಿಸಿದ ಕುಮಾರಿ ಅಶ್ವಿನಿ ಚಿಕ್ಕರಡ್ಡಿ ಅವರು ವಿವಾಹದ ನಿಮಿತ್ಯ ಸೇವೆಯಿಂದ ನಿರ್ಗಮಿಸಿದ್ದರಿಂದ ಅವರನ್ನು ಸಹ ಸನ್ಮಾನಿಸಲಾಯಿತು. ಅವರ ಮುಂದಿನ ಸಂಸಾರಿಕ ಜೀವನ ಸುಖಕರವಾಗಿರಲೆಂದು ಶುಭ ಕೋರಲಾಯಿತು.
ಸಮಾರಂಭದಲ್ಲಿ ಶ್ರೀ ಎನ್. ವಿ. ಜೋಶಿ, ಬಿಪಿನ್ ಚಿಕ್ಕಟ್ಟಿ ಬಿಸಿಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ, ಪ್ರೊ. ಬಿ. ವಿ. ಜೋಶಿ, ಧಾರವಾಡದ ಶಿಕ್ಷಕರಾದ ಶ್ರೀ ಎಂ. ಆರ್. ಅಂಗಡಿ ಹಾಗೂ ಶ್ರೀ ಎಸ್. ಬಿ. ಹಿರೇಮಠ, ವಿನಯ್ ಚಿಕ್ಕಟ್ಟಿ ಐಸಿಎಸ್ಇ ಶಾಲೆಯ ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಉಪಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ರಿಯಾನಾ ಮುಲ್ಲಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕರಾದ ಶ್ರೀಶೈಲ ಶಿ. ಬಡಿಗೇರ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಗಣ್ಯರನ್ನು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.
