ಗದಗ : ಗದಗ ನಗರದ ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಪ್ರತಿವರ್ಷವೂ ಸಾಧನೆಯ ಹೊಸ ಮೆಟ್ಟಿಲುಗಳನ್ನು ಏರುತ್ತಿರುವುದಕ್ಕೆ ೨೦೨೫–೨೦೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸ್ಪಷ್ಟ ಸಾಕ್ಷಿಯಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ದಿವ್ಯಾಶ್ರೀ ಬಂಡಿವಾಡಮಠ ಈ ಸಾಧನೆಗೆ ಪ್ರತ್ಯಕ್ಷ ಉದಾಹರಣೆಯಾಗಿದ್ದಾಳೆ.
ಕುಮಾರಿ ದಿವ್ಯಾಶ್ರೀ ಬಂಡಿವಾಡಮಠ ಅವರು ಒಟ್ಟು ಶೇಕಡಾ ೯೫.೧೭ ಅಂಕಗಳನ್ನು ಗಳಿಸಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಷಯವಾರು ಅಂಕಗಳಲ್ಲಿ ಸಂಖ್ಯಾಶಾಸ್ತ್ರದಲ್ಲಿ ೧೦೦ಕ್ಕೆ ೯೯, ಲೆಕ್ಕಶಾಸ್ತ್ರದಲ್ಲಿ ೧೦೦ಕ್ಕೆ ೯೬ ಹಾಗೂ ಅರ್ಥಶಾಸ್ತ್ರದಲ್ಲಿ ೧೦೦ಕ್ಕೆ ೯೮ ಅಂಕಗಳನ್ನು ಪಡೆದಿರುವುದು ಗಮನಾರ್ಹವಾಗಿದೆ.

ವಿದ್ಯಾರ್ಥಿನಿಯ ಈ ಸಾಧನೆಗೆ ಮೆಚ್ಚುಗೆ ಸೂಚಿಸಿ, ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರಾದ ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ಪರಶುರಾಮ ಕೋಟ್ನಿಕಲ್ ಹಾಗೂ ಪ್ರೊ. ಸಂಗೀತಾ ಬೀಳಗಿ ಅವರ ಸ್ವನಿವಾಸದಲ್ಲಿ ಸಂಭ್ರಮದ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು.
ವಿದ್ಯಾರ್ಥಿನಿಯ ಅವಿರತ ಪರಿಶ್ರಮ ಹಾಗೂ ಉಪನ್ಯಾಸಕರ ಸಮರ್ಪಿತ ಬೋಧನೆಗಳು ಈ ಸಾಧನೆಗೆ ಕಾರಣವಾಗಿವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಪ್ರೊ. ರಾಜೇಶ ಕುಲಕರ್ಣಿ ಹರ್ಷ ವ್ಯಕ್ತಪಡಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಕುಮಾರ ವಜ್ರಬಂಡಿ ಅವರು ಉಪನ್ಯಾಸಕರ ನಿರೀಕ್ಷೆಯನ್ನು ಈಡೇರಿಸಿದ್ದಕ್ಕಾಗಿ ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯರಾದ ಪ್ರೊ. ಪುನೀತ್ ದೇಶಪಾಂಡೆ, ಆಡಳಿತಾಧಿಕಾರಿಗಳಾದ ಶ್ರೀ ಮೃತ್ಯುಂಜಯ್ಯ ಹಿರೇಮಠ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ ಸೇರಿದಂತೆ ಸಮಸ್ತ ಉಪನ್ಯಾಸಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ವಿದ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
