ಗದಗ: ಸನ್ಮಾರ್ಗ ಪದವಿ ಪೂರ್ವ ಕಾಲೇಜಿನ ಶಿಕ್ಷಣಾಂಬರಕ್ಕೆ ಮತ್ತೊಂದು ಯಶಸ್ಸಿನ ನಕ್ಷತ್ರವಾಗಿ ಹೊರಹೊಮ್ಮಿದ ಕುಮಾರ ಶಿವರಾಮ ಚೈತನ್ಯ ಕುಲಕರ್ಣಿಗೆ, ಅವನ ಸ್ವನಿವಾಸದಲ್ಲಿಯೇ ಕಾಲೇಜಿನ ಆಡಳಿತ ಮಂಡಳಿಯವರು ಸದಭಿಮಾನದಿಂದ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪುನೀತ್ ದೇಶಪಾಂಡೆ, ನಿರ್ದೇಶಕರಾದ ಪ್ರೊ. ಸೈಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿಗಳಾದ ಶ್ರೀ ಎಂ.ಸಿ. ಹಿರೇಮಠರು ಹಾಗೂ ಹಿಂದಿ ಭಾಷಾ ಉಪನ್ಯಾಸಕರಾದ ಪ್ರೊ. ಇಮ್ತಿಯಾಜ್ ಅಳವಂಡಿ ಉಪಸ್ಥಿತರಿದ್ದು ವಿದ್ಯಾರ್ಥಿಯನ್ನು ಗೌರವಿಸಿದರು.

ಕುಮಾರ ಶಿವರಾಮ ಚೈತನ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು, ೨೦೨೫-೨೦೨೬ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು ಶೇ. ೯೭.೨% ಅಂಕಗಳನ್ನು ಗಳಿಸಿದ್ದಾನೆ. ಜೊತೆಗೆ ಗಣಿತಶಾಸ್ತ್ರದಲ್ಲಿ ೧೦೦ಕ್ಕೆ ೧೦೦ ಅಂಕ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ೧೦೦ಕ್ಕೆ ೯೮ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಾಚಾರ್ಯರಾದ ಪ್ರೊ. ಪುನೀತ್ ದೇಶಪಾಂಡೆ, ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿ, ಸಂಸ್ಥೆ ಅವನ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸಹಾಯ ಮತ್ತು ಸಹಕಾರ ನೀಡಲು ಸದಾ ಸಿದ್ಧವಿದೆ ಎಂದು ತಿಳಿಸಿದರು.
ಆಡಳಿತಾಧಿಕಾರಿಗಳಾದ ಶ್ರೀ ಮೃತ್ಯುಂಜಯ್ಯ ಹಿರೇಮಠರು ಮಾತನಾಡಿ, ಶಿವರಾಮ ಚೈತನ್ಯ ಸ್ವಭಾವದಲ್ಲಿ ಮೃದುವಾಗಿದ್ದರೂ ಕಠಿಣ ಪರಿಶ್ರಮದ ಮೂಲಕ ಸಾಧನೆಗೈದಿದ್ದು, ಇತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾನೆ ಎಂದು ಹೇಳಿದರು.

ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ ಹಾಗೂ ಸಮಸ್ತ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನವು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿ ಹಾಗೂ ಸಮಾಜಮುಖಿಯಾಗಿರಲಿ ಎಂದು ಹಾರೈಸಿದರು.
